ಬಾರ್ಮರ್: ಪಾಕಿಸ್ತಾನದ ಗಡಿಯಿಂದ ಕೇವಲ 40 ಕಿ.ಮೀ.ದೂರದಲ್ಲಿ ರಾಜಸ್ಥಾನದ ಬಾರ್ಮರ್ನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 925ರಲ್ಲಿ ಭಾರತೀಯ ವಾಯುಪಡೆ (ಐಎಎಫ್) ವಿಮಾನಗಳಿಗಾಗಿ ನಿರ್ಮಿಸಲಾಗಿರುವ 3 ಕಿ.ಮೀ ಉದ್ದದ ತುರ್ತು ಭೂ ಸ್ಪರ್ಶ ನೆಲೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ಸಶಸ್ತ್ರ ಪಡೆಗಳ ವಿಮಾನಗಳಿಗಾಗಿ ‘ತುರ್ತು ಲ್ಯಾಂಡಿಂಗ್ ಸ್ಟ್ರಿಪ್’ಗಳನ್ನು ಒಂದೂವರೆ ವರ್ಷಗಳ ಬದಲಿಗೆ ಕೇವಲ 15 ದಿನಗಳಲ್ಲಿ ಅಭಿವೃದ್ಧಿ ಪಡಿಸಿಕೊಡಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.
‘ಐಎಎಫ್ ಮುಖ್ಯಸ್ಥರು ನನ್ನನ್ನು ಭೇಟಿಯಾದಾಗ ಈ ಸ್ಟ್ರಿಪ್ ನಿರ್ಮಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 19 ತಿಂಗಳು ತೆಗೆದುಕೊಂಡಿತು ಎಂದು ಹೇಳಿದ್ದರು . ಆಗ ನಾನು ಅವರಿಗೆ ಮುಂದಿನ ದಿನಗಳಲ್ಲಿ 15 ದಿನಗಳಲ್ಲಿ ಗುಣಮಟ್ಟದ ಲ್ಯಾಂಡಿಂಗ್ ಸ್ಟ್ರಿಪ್ ಅನ್ನು ಅಭಿವೃದ್ಧಿಪಡಿಸಿಕೊಡುವುದಾಗಿ ತಿಳಿಸಿದ್ದೇನೆ’ ಎಂದು ಗಡ್ಕರಿ ಭಾಷಣದಲ್ಲಿ
ಹೇಳಿದರು.
ಐಎಎಫ್ ವಿಮಾನಗಳು ತುರ್ತು ಭೂಸ್ಪರ್ಶಕ್ಕೆ ಬಳಸಲಾಗುತ್ತಿರುವ ದೇಶದ ಮೊದಲ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 925 ಆಗಿದೆ. ಇಲ್ಲಿನ 350 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ವಿಮಾನ ನಿಲ್ದಾಣ ಇದ್ದಂತಿಲ್ಲ. ಹಾಗಾಗಿ ಸಶಸ್ತ್ರ ಪಡೆಗಳು ಇಲ್ಲಿ ಸಣ್ಣ ವಿಮಾನ ನಿಲ್ದಾಣ ನಿರ್ಮಿಸಿಕೊಳ್ಳಲು ಮುಂದಾದರೆ, ಅದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಅವರು
ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.