ನವದೆಹಲಿ: ಭಾರತದ ಸಂತ ಪರಂಪರೆಯು ಯಾವಾಗಲೂ ‘ಏಕ ಭಾರತ, ಶ್ರೇಷ್ಠ ಭಾರತ’ದ ಪರವಾಗಿ ನಿಂತಿದೆ. ರಾಮಕೃಷ್ಣ ಮಿಷನ್ ಸ್ಥಾಪನೆಯೂ ಇದೇ ಉದ್ದೇಶಕ್ಕೆ ಸಂಬಂಧಿಸಿದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.
ಸ್ವಾಮಿ ಆತ್ಮಸ್ಥಾನಂದ ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ‘ರಾಮಕೃಷ್ಣ ಮಿಷನ್ ಸ್ಥಾಪಿಸಿದ ಸ್ವಾಮಿ ವಿವೇಕಾನಂದರು ಭಾರತವನ್ನು ಶ್ರೇಷ್ಠಗೊಳಿಸಲು ಶ್ರಮಿಸಿದರು’ ಎಂದು ಹೇಳಿದ್ದಾರೆ.
‘ದೇಶದ ಎಲ್ಲಾ ಭಾಗಗಳಲ್ಲಿ ವಿವೇಕಾನಂದರ ಪ್ರಭಾವವಿದೆ. ಅವರ ಸಂಚಾರದಿಂದಾಗಿ ಗುಲಾಮಗಿರಿಯ ಯುಗದಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತವಾಯಿತು. ವಿವೇಕಾನಂದರ ಈ ಸಂಪ್ರದಾಯವನ್ನು ಆತ್ಮಸ್ಥಾನಂದರು ತಮ್ಮ ಜೀವನದುದ್ದಕ್ಕೂ ಮುನ್ನಡೆಸಿಕೊಂಡು ಬಂದರು’ ಎಂದು ಮೋದಿ ತಿಳಿಸಿದರು.
‘ನೂರಾರು ವರ್ಷಗಳ ಹಿಂದಿನ ಆದಿ ಶಂಕರಾಚಾರ್ಯರಿರಲಿ ಅಥವಾ ಆಧುನಿಕ ಕಾಲದಲ್ಲಿ ಸ್ವಾಮಿ ವಿವೇಕಾನಂದರಿರಲಿ, ಭಾರತದ ಸಂತ ಪರಂಪರೆಯು ಯಾವಾಗಲೂ 'ಏಕ ಭಾರತ, ಶ್ರೇಷ್ಠ ಭಾರತ'ದ ಪರವಾಗಿತ್ತು. ರಾಮಕೃಷ್ಣ ಮಿಷನ್ ಸ್ಥಾಪನೆಯು ಇದೇ ಕಲ್ಪನೆಗೆ ಸಂಬಂಧಿಸಿದ್ದಾಗಿದೆ‘ ಎಂದು ಪ್ರಧಾನಿಯವರು ವಿಡಿಯೊ ಸಂದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.