ಹಫ್ಲಾಂಗ್: ಪ್ರವಾಹ ಹಾಗೂ ಭೂಕುಸಿತದಿಂದ ತತ್ತರಿಸಿರುವ ಅಸ್ಸಾಂನ ದಿಮಾ ಹಸಾವೊ ಜಿಲ್ಲೆಗೆ ಮುಖ್ಯಮಂತ್ರಿಹಿಮಂತ ಬಿಸ್ವಾ ಶರ್ಮಾ ಅವರು ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಬಳಿಕ ವರದಿಗಾರರಿಗೆ ಪ್ರತಿಕ್ರಿಯಿಸಿದ ಅವರು ‘ಕಳೆದ 5–10 ವರ್ಷಗಳಲ್ಲಿ ಕೈಗೊಂಡಿದ್ದ ಮೂಲಸೌಕರ್ಯ ನಿರ್ಮಾಣಗಳಿಗೆ ಹಾನಿಯಾಗಿದೆ’ ಎಂದಿದ್ದಾರೆ.
‘ಈ ಮೂಲಸೌಕರ್ಯಗಳ ಮರು ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲಾ ನೆರವು ಒದಗಿಸಲಿದೆ.ದಿಮಾ ಹಸಾವೊ ಜಿಲ್ಲೆಯ ಹಲವು ಭಾಗಗಳಲ್ಲಿ ಭೂಕುಸಿತದಿಂದಾಗಿ ಸಂಪರ್ಕ ಕಡಿತಗೊಂಡಿದ್ದು, ಆದಷ್ಟು ಬೇಗ ಪರ್ಯಾರ್ಯ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಅವರು ಭರವಸೆ ನೀಡಿದ್ದಾರೆ.
ಹಲವೆಡೆ ರಸ್ತೆಗಳಿಗೆ ಭಾರಿ ಹಾನಿ ಉಂಟಾಗಿದೆ. ಇವುಗಳಲ್ಲಿ ಕೆಲವು ರಸ್ತೆಗಳ ಮರು ನಿರ್ಮಾಣ ಬಹಳ ಕಷ್ಟ. ನೀರಾವರಿ, ವಿದ್ಯುತ್ ಸೌಲಭ್ಯ, ಕಟ್ಟಡ ಮತ್ತು ಸೇತುವೆಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿವೆ. ರಸ್ತೆಗಳನ್ನು ಕೆಲವು ವಾರಗಳೊಳಗೆ ದುರಸ್ತಿಗೊಳಿಸಲಾಗುವುದು.ದಿಮಾ ಹಸಾವೊ – ಬರಾಕ್ ಕಣಿವೆ ಹಾಗೂ ನೆರೆ ರಾಜ್ಯಗಳಾದ ತ್ರಿಪುರಾ, ಮಿಜೋರಾಂ ಮತ್ತು ಮಣಿಪುರದ ನಡುವೆ ಸಂಪರ್ಕ ಕಲ್ಪಿಸುವ ರೈಲು ಸೇವೆಯನ್ನು ಜುಲೈ ತಿಂಗಳಲ್ಲಿ ಪುನರಾರಂಭಗೊಳಿಸಲಾಗುವುದು ಎಂದುಹಿಮಂತ್ ಬಿಸ್ವಾ ಅವರು ಹೇಳಿದ್ದಾರೆ.
ಈ ಬಾರಿ ಪ್ರವಾಹದಲ್ಲಿದಿಮಾ ಹಸಾವೊ ಜಿಲ್ಲೆಯೂ ಅತಿ ಹೆಚ್ಚು ಹಾನಿಗೊಂಡಿದೆ. ಇಲ್ಲಿ ಮೊಬೈಲ್ ನೆಟವರ್ಕ್ ಪುನರ್ ಸ್ಥಾಪನೆಯೂ ಅಧಿಕಾರಿಗಳಿಗೆ ಮತ್ತೊಂದು ದೊಡ್ಡ ಸವಾಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದೇನೆ. ದಿಮಾಹಸಾವೊನಲ್ಲಿ ಮೂಲಸೌಕರ್ಯಗಳ ಮರುನಿರ್ಮಾಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಒಗ್ಗೂಡಿ ಕೆಲಸ ಮಾಡಲಿದೆ’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.