ADVERTISEMENT

ಕಾಗದ ಪತ್ರ ಹರಿದ ವಿರೋಧ ಪಕ್ಷಗಳ ನಡೆ ಸಂಸತ್‌ಗೆ ಮಾಡಿದ ಅಪಮಾನ: ಮೋದಿ ಆಕ್ರೋಶ 

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 7:42 IST
Last Updated 3 ಆಗಸ್ಟ್ 2021, 7:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಸಂಸತ್ತಿನಲ್ಲಿ ಕಾಗದ ಪತ್ರಗಳನ್ನು ಹರಿದು ಹಾಕಿದ, ಮಸೂದೆಗಳು ಅಂಗೀಕಾರ ಆಗುತ್ತಿರುವ ವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿರೋಧ ಪಕ್ಷಗಳ ವರ್ತನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷಗಳು ತಮ್ಮ ನಡವಳಿಕೆ ಮೂಲಕ ಸಂವಿಧಾನ ಮತ್ತು ಶಾಸಕಾಂಗವನ್ನು ಅಪಮಾನಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಭಾಷಣದ ಕುರಿತು ಸುದ್ದಿಗಾರರಿಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡುತ್ತಿದ್ದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಈ ವಿಚಾರ ತಿಳಿಸಿದ್ದಾರೆ.

ಪೆಗಾಸಸ್‌ ಕುರಿತ ಐಟಿ ಸಚಿವ ಅಶ್ವಿನಿ ವೈಷ್ಣವ ಅವರ ಹೇಳಿಕೆಯನ್ನು ಟಿಎಂಸಿ ಸದಸ್ಯರು ರಾಜ್ಯಸಭೆಯಲ್ಲಿ ಹರಿದುಹಾಕಿದ್ದರೆ, ಲೋಕಸಭೆಯಲ್ಲೂ ಹಲವು ಸದಸ್ಯರು ಕಾಗದ ಪತ್ರಗಳನ್ನು ಹರಿದು ಸ್ಪೀಕರ್‌ ಕಡೆಗೆ ತೂರಿದ ಘಟನೆಗಳು ಮುಂಗಾರು ಅಧಿವೇಶನದ ವೇಳೆ ನಡೆದಿವೆ.

ADVERTISEMENT

ಸಂಸತ್ತಿನಲ್ಲಿ ಮಸೂದೆಗಳ ಅಂಗೀಕಾರದ ವಿಧಾನವನ್ನು ಟೀಕಿಸಿದ್ದ ಟಿಎಂಸಿ ನಾಯಕ ಡೆರಿಕ್ ಒಬ್ರೈನ್ ಅವರ ಟ್ವೀಟ್ ಕೂಡ ಮೋದಿಯವರನ್ನು ಕೆರಳಿಸಿದೆ ಎಂದು ಜೋಶಿ ಮತ್ತು ವಿ ಮುರಳೀಧರನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಮೊದಲ 10 ದಿನಗಳಲ್ಲಿ ಮೋದಿ-ಶಾ ಅವರು 12 ಮಸೂದೆಗಳನ್ನು ಸರಾಸರಿ ಏಳು ನಿಮಿಷಗಳಲ್ಲಿ ಅಂಗೀಕರಿಸಿದ್ದಾರೆ. ಇದೇನು ಶಾಸನಗಳ ಅಂಗೀಕಾರವೋ? ‘ಪಾಪ್ರಿ ಚಾಟ್’ (ತಿನಿಸು) ಮಾಡುವುದೋ? ಎಂದು ಡೆರಿಕ್‌ ಒಬ್ರೈನ್‌ ಟ್ವೀಟ್‌ ಮಾಡಿದ್ದರು.

ಇಂತಹ ಟೀಕೆಗಳು ಸಂಸದೀಯ ಪ್ರಕ್ರಿಯೆ ಮತ್ತು ಚುನಾಯಿತ ಪ್ರತಿನಿಧಿಗಳನ್ನು ಅವಹೇಳನ ಮಾಡಿದಂತೆ ಎಂದು ಮುರಳೀಧರನ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಪಕ್ಷಗಳ ನಡವಳಿಕೆಯು ಸಂಸತ್ತು ಮತ್ತು ಸಂವಿಧಾನಕ್ಕೆ ಮಾಡಿದ "ಅವಮಾನ" ಎಂದು ಮೋದಿ ಅವರು ಹೇಳಿರುವುದಾಗಿ ಜೋಶಿ ತಿಳಿಸಿದರು.

ಪೆಗಾಸಸ್‌ ಗೂಢಚರ್ಯೆಯ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಸಂಸತ್‌ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ. ಇತ್ತ ಸರ್ಕಾರ ಪೆಗಾಸಸ್‌ ಆರೋಪ ಅಸಂಬದ್ಧ ಎಂದು ಹೇಳಿದ್ದು, ಚರ್ಚೆಗೆ ನಿರಾಕರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.