ADVERTISEMENT

ಭಯೋತ್ಪಾದನೆ ನಿಗ್ರಹದಲ್ಲಿ ಉಲೇಮಾಗಳ ಪಾತ್ರ ಮಹತ್ವದ್ದು: ದೋವಲ್‌

ಪಿಟಿಐ
Published 29 ನವೆಂಬರ್ 2022, 13:38 IST
Last Updated 29 ನವೆಂಬರ್ 2022, 13:38 IST
ಅಜಿತ್‌ ದೋವಲ್‌
ಅಜಿತ್‌ ದೋವಲ್‌   

ನವದೆಹಲಿ (ಪಿಟಿಐ): ‘ಪ್ರಗತಿಪರ ವಿಚಾರಗಳನ್ನು ಪ್ರಚಾರ ಮಾಡುವ ಮೂಲಕ ತೀವ್ರವಾದಿ ಹಾಗೂ ಉಗ್ರಗಾಮಿಗಳನ್ನು ಹತ್ತಿಕ್ಕುವಲ್ಲಿ ಉಲೇಮಾಗಳ ಪಾತ್ರ ಮಹತ್ವದ್ದಾಗಿದೆ’ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್‌ ಡೊಭಾಲ್‌ ಹೇಳಿದ್ದಾರೆ.

ಇಂಡೊನೇಷ್ಯಾ ಮತ್ತು ಭಾರತೀಯ ಉಲೇಮಾಗಳು ಹಾಗೂ ಇತರ ನಾಯಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಅವರು, ‘ಐಸಿಸ್‌ ಪ್ರೇರಿತ ಭಯೋತ್ಪಾದನಾ ಸಂಘಟನೆಗಳು ಹಾಗೂ ಸಿರಿಯಾ, ಅಫ್ಗಾನಿಸ್ತಾನದಂತಹ ದೇಶಗಳಿಂದ ಮರಳಿರುವ ಉಗ್ರರು ದೇಶದ ಭದ್ರತೆಗೆ ಸವಾಲಾಗಿ ಪರಿಣಮಿಸಿದ್ದಾರೆ. ಇವರ ನಿರ್ಮೂಲನೆಗೆ ನಾಗರಿಕ ಸಮಾಜದ ಸಹಕಾರ ತುಂಬಾ ಅಗತ್ಯ’ ಎಂದಿದ್ದಾರೆ.

‘ಸಹನೆ, ಸಾಮರಸ್ಯ ಮತ್ತು ಶಾಂತಿಯುತ ಸಹಬಾಳ್ವೆ ಉತ್ತೇಜಿಸುವುದಕ್ಕಾಗಿ ಭಾರತ ಮತ್ತು ಇಂಡೊನೇಷ್ಯಾದ ಉಲೇಮಾಗಳು ಹಾಗೂ ತತ್ವಜ್ಞಾನಿಗಳನ್ನು ಒಗ್ಗೂಡಿಸುವುದು, ಆ ಮೂಲಕಹಿಂಸಾತ್ಮಕ ಉಗ್ರಗಾಮಿತ್ವ, ಭಯೋತ್ಪಾದನೆ ಮತ್ತು ತೀವ್ರವಾದಿತ್ವದ ವಿರುದ್ಧ ಸಮರ ಸಾರುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಪ್ರಜಾಪ್ರಭುತ್ವದಲ್ಲಿ ದ್ವೇಷ ಭಾಷಣ, ಪೂರ್ವಾಗ್ರಹ, ರಾಕ್ಷಸೀಕರಣ, ಹಿಂಸೆ, ಬಿಕ್ಕಟ್ಟು ಹಾಗೂ ಧರ್ಮದ ದುರಪಯೋಗಕ್ಕೆ ಅವಕಾಶವೇ ಇಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಯುವಕರು ಭಯೋತ್ಪಾದಕರ ಪ್ರಮುಖ ಅಸ್ತ್ರಗಳಾಗುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಯುವ ಸಮುದಾಯದ ಶಕ್ತಿಯನ್ನು ಸರಿಯಾದ ದಿಸೆಯಲ್ಲಿ ಬಳಕೆ ಮಾಡಿಕೊಂಡಿದ್ದೇ ಆದರೆ ಅವರು ಪ್ರಗತಿಪರ ಸಮಾಜದ ಅಡಿಗಲ್ಲು ಆಗಬಲ್ಲರು’ ಎಂದು ತಿಳಿಸಿದ್ದಾರೆ.

‘ಉಲೇಮಾಗಳು ಇಸ್ಲಾಂ ಧರ್ಮದ ಮೂಲ ತತ್ವ ಹಾಗೂ ಸಹಿಷ್ಣುತೆ ಕುರಿತು ಜನರಿಗೆ ಶಿಕ್ಷಣ ನೀಡಬೇಕು. ಉಗ್ರಗಾಮಿತ್ವ ಮತ್ತು ತೀವ್ರವಾದಿ ಚಿಂತನೆಯು ಇಸ್ಲಾಂ ಧರ್ಮದ ಮೂಲ ತತ್ವಕ್ಕೆ ವಿರುದ್ಧವಾದುದು. ಇಸ್ಲಾಂ ಎಂದರೆ ಶಾಂತಿ ಮತ್ತು ಯೋಗಕ್ಷೇಮ ಎಂಬ ಅರ್ಥವಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.