ADVERTISEMENT

ಚಂದ್ರಯಾನ–2: ಯಶಸ್ವಿಯಾಗಿ ನಭಕ್ಕೆ ನೆಗೆದ ‘ಬಾಹುಬಲಿ’

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 11:36 IST
Last Updated 22 ಜುಲೈ 2019, 11:36 IST
   

ಚೆನ್ನೈ: ಚಂದ್ರಯಾನ–2ರ ನೌಕೆಯನ್ನು ಹೊತ್ತ ರಾಕೆಟ್ ‘ಬಾಹುಬಲಿ’ ಸೋಮವಾರ ಮಧ್ಯಾಹ್ನ 2.45ಕ್ಕೆ ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಹಾರಿತು.

ಇದರೊಂದಿಗೆ, ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿರುವ ಆರ್ಬಿಟರ್‌, ಲ್ಯಾಂಡರ್‌, ರೋವರ್‌ಗಳು ಪಯಣ ಆರಂಭಿಸಿದ್ದು ಸೆಪ್ಟೆಂಬರ್‌ ವೇಳೆಗೆ ಚಂದ್ರನಲ್ಲಿ ಇಳಿಯುವ ನಿರೀಕ್ಷೆ ಇದೆ. ಸಂಪೂರ್ಣ ದೇಶೀಯ ತಂತ್ರಜ್ಞಾನ ಅಳವಡಿಸಿ ಯೋಜನೆ ಹಮ್ಮಿಕೊಂಡಿರುವುದು ಈ ಬಾರಿಯ ವಿಶೇಷವಾಗಿದೆ.

ಈ ಮೊದಲು ಜುಲೈ 15ರ ರಾತ್ರಿ 2.51ಕ್ಕೆ ಉಡಾವಣೆ ನಿಗದಿಯಾಗಿತ್ತು. ಆದರೆ, ಆದರೆ ಉಡ್ಡಯನಕ್ಕೆ 56 ನಿಮಿಷಗಳು ಬಾಕಿ ಇರುವಾಗ ಎದುರಾದ ತಾಂತ್ರಿಕ ಸಮಸ್ಯೆಯಿಂದಾಗಿ ಉಡಾವಣೆಯನ್ನು ಮುಂದೂಡಲಾಗಿತ್ತು.

‘ಚಂದ್ರಯಾನ–2’ರಂತಹ ಪ್ರಯತ್ನಗಳು ನಮ್ಮ‌ ಯುವಕರಿಗೆ ವಿಜ್ಞಾನ, ಉನ್ನತ ಗುಣಮಟ್ಟದ ಸಂಶೋಧನೆ ಹಾಗೂ ಅನ್ವೇಷಣೆಯತ್ತ ಮುಖಮಾಡಲು ಧೈರ್ಯ ನೀಡಲಿದೆ. ‘ಚಂದ್ರಯಾನ–2’ ಚಂದ್ರನ ಕುರಿತ ನಮ್ಮ ಜ್ಞಾನ ವೃದ್ಧಿಗೆ ನೆರವಾಗಲಿದೆ.’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ

ನಮ್ಮ ಭವ್ಯ ಇತಿಹಾಸದ ಚಾರಿತ್ರಿಕ ದಾಖಲೆಗಳಲ್ಲಿ ಈ ವಿಶೇಷ ಕ್ಷಣ ಅಚ್ಚೊತ್ತಿರುತ್ತದೆ. ಚಂದ್ರಯಾನ-2 ಉಡ್ಡಯನವು ವಿಜ್ಞಾನ ಲೋಕದಲ್ಲಿನಮ್ಮ ವಿಜ್ಞಾನಿಗಳ ಶಕ್ತಿ ಮತ್ತು 130 ಕೋಟಿ ಭಾರತೀಯರ ವಿಶ್ವಾಸವನ್ನು ತೋರಿಸುತ್ತದೆ. ಪ್ರತಿಯೊಬ್ಬ ಭಾರತೀಯನೂ ಇವತ್ತು ಅತೀವ ಹೆಮ್ಮೆ ಪಡುತ್ತಾನೆ ಎಂದು ಟ್ವೀಟ್ ಮಾಡಿದ ಮೋದಿ ಚಂದ್ರಯಾನ-2 ಉಡ್ಡಯನ ವೀಕ್ಷಿಸುತ್ತಿರುವ ಫೋಟೊವನ್ನು ಶೇರ್ ಮಾಡಿದ್ದಾರೆ.

ಚಂದ್ರಯಾನ–2 ರ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಸೂಪರ್ ಪವರ್ ಮಾಡಿದ್ದಕ್ಕೆ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು ಎಂದು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.