ADVERTISEMENT

ಅಗ್ನಿವೀರರು ವಾಯುಪಡೆಯ ಸೇವೆಗೆ ಮರು ಅರ್ಜಿ ಸಲ್ಲಿಸಬಹುದು: ವಿ.ಆರ್‌. ಚೌಧರಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 9:26 IST
Last Updated 18 ಜೂನ್ 2022, 9:26 IST
   

ನವದೆಹಲಿ: ಅಗ್ನಿಪಥ ಯೋಜನೆ ಒಂದು ಧನಾತ್ಮಕ ಹೆಜ್ಜೆ ಎಂದು ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಸೇನಾ ನೇಮಕಾತಿಗೆ ಪ್ರಕಟಿಸಿರುವ ಅಗ್ನಿಪಥ ಯೋಜನೆ ವಿರೋಧಿಸಿ ದೇಶದ ಹಲವೆಡೆ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂಸಾಚಾರ ಮತ್ತು ಬೆಂಕಿ ಹಚ್ಚುವುದು ಪರಿಹಾರವಲ್ಲ. ಅವರಿಗೆ ಸಂದೇಹವಿದ್ದರೆ, ಮಿಲಿಟರಿ ಕೇಂದ್ರಗಳು, ವಾಯುಪಡೆಯ ನೆಲೆಗಳು, ನೌಕಾನೆಲೆಗಳು ಸುತ್ತಲೂ ಇವೆ. ಅವರು ಅಲ್ಲಿಗೆ ಹೋಗಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT

ಅವರು ಈಗ ಮಾಡಬೇಕಾಗಿರುವುದು ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವುದು, ಯೋಜನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು. ಯೋಜನೆಯ ಪ್ರಯೋಜನಗಳನ್ನು ಅವರು ಸ್ವತಃ ನೋಡುತ್ತಾರೆ. ಇದು ಅವರ ಮನಸ್ಸಿನಲ್ಲಿರುವ ಎಲ್ಲಾ ಅನುಮಾನಗಳನ್ನು ನಿವಾರಿಸುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಹೇಳಿದ್ದಾರೆ

ನೀವು ಸಂಪೂರ್ಣ ಯೋಜನೆಯನ್ನು ಒಟ್ಟಾರೆಯಾಗಿ ನೋಡಿದರೆ, ಹೈಲೈಟ್ ಮಾಡಬೇಕಾದ ಹಲವು ಪ್ರಯೋಜನಗಳಿವೆ. 1) ಯುದ್ಧದ ಡೊಮೇನ್‌ಗಳು ಬದಲಾಗುತ್ತಿವೆ, ನಮಗೆ ಸೇವೆಗಳಲ್ಲಿ ಕಿರಿಯ, ಹೆಚ್ಚು ತಂತ್ರಜ್ಞಾನದ ಬಗ್ಗೆ ತಿಳಿದಿರುವ ಬುದ್ಧಿವಂತ ಜನರು ಬೇಕಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಗ್ನಿಪಥ ಯೋಜನೆಯಲ್ಲಿ ಅಗ್ನಿವೀರರಿಗೆ 2-3 ಆಯ್ಕೆಗಳಿವೆ. 1) 4 ವರ್ಷಗಳ ಬಳಿಕ ವಾಯುಪಡೆಯ ಸೇವೆಗೆ ಮರು-ನೋಂದಣಿ ಮಾಡಿಕೊಳ್ಳಬಹುದು. ಆಗ ಅವರಿಗೆ ಪಿಂಚಣಿ ಸೌಲಭ್ಯ ದೊರೆಯಲಿದೆ. 2) ಉನ್ನತ ಶಿಕ್ಷಣವನ್ನು ಮುಂದುವರಿಸಲು ಬಯಸಿದರೆ ಮಾಡಬಹುದು ಅಥವಾ ಸ್ವಂತವಾಗಿ ಉದ್ಯಮವನ್ನು ಸ್ಥಾಪಿಸಲು ಬಯಸಿದರೆ ಅದನ್ನು ಮಾಡಬಹುದು. ಇಲ್ಲವೆ ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ದೊರೆಯಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.