ಭೋಪಾಲ್/ಜಬಲ್ಪುರ:ಮಧ್ಯಪ್ರದೇಶದ ದಮೋಹ ನಾಕಾ ಬಳಿಯ ನ್ಯೂ ಲೈಫ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ನಾಲ್ವರು ರೋಗಿಗಳು ಸೇರಿ, 8 ಮಂದಿ ಮೃತಪಟ್ಟ ಘಟನೆ ಸಂಬಂಧ ಆಸ್ಪತ್ರೆಯ ಮಾಲೀಕರೂ ಆದ ನಾಲ್ವರು ವೈದ್ಯರು ಮತ್ತು ಆಸ್ಪತ್ರೆಯ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ.
ವೈದ್ಯರಾದ ನಿಶಿತ್ ಗುಪ್ತಾ, ಸುರೇಶ್ ಪಟೇಲ್, ಸಂಜಯ್ ಪಟೇಲ್, ಸಂತೋಷ್ ಸೋನಿ ಹಾಗೂ ವ್ಯವಸ್ಥಾಪಕ ರಾಮ್ ಸೋನಿ ಬಂಧಿತರು. ಇವರ ವಿರುದ್ಧ ಉದ್ದೇಶಪೂರಿತ ಕೊಲೆ ಪ್ರಕರಣವನ್ನುಜಬಲ್ಪುರ ಠಾಣೆ ಪೊಲೀಸರು ದಾಖಲಿಸಿದ್ದಾರೆ. ಪರಾರಿಯಾಗಿರುವ ಇನ್ನೂ ನಾಲ್ವರು ವೈದ್ಯರ ಬಂಧನಕ್ಕೆ ಬಲೆ ಬೀಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
‘ಆಸ್ಪತ್ರೆಯಲ್ಲಿಅಗ್ನಿ ಸುರಕ್ಷತೆಯ ನಿರಾಕ್ಷೇಪಣಾ ಪತ್ರವೂ (ಎನ್ಒಸಿ) ಅವಧಿ ಮೀರಿದ್ದಾಗಿರುವುದು, ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದಿರುವ ಲೋಪಗಳು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿವೆ’ ಎಂದು ಮಧ್ಯಪ್ರದೇಶ ಸರ್ಕಾರದ ಗೃಹ ಸಚಿವ ನರೋತ್ತಮ್ ಮಿಶ್ರಾ ಮಂಗಳವಾರ ತಿಳಿಸಿದ್ದಾರೆ.
ವಿಭಾಗೀಯ ಆಯುಕ್ತರ ನೇತೃತ್ವದಲ್ಲಿ ರಚಿಸಲಾಗಿರುವ ತನಿಖಾ ಸಮಿತಿಯು, ಆಸ್ಪತ್ರೆಯಲ್ಲಿನ ಅಗ್ನಿ ಸುರಕ್ಷತಾ ಕ್ರಮಗಳು ಮತ್ತು ಆರೋಗ್ಯ ವ್ಯವಸ್ಥೆಯ ಕುರಿತು ಸಮಗ್ರ ವರದಿ ನೀಡಲಿದೆ ಎಂದು ಮಿಶ್ರಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.