ADVERTISEMENT

ಧನಕರ್ ನೂತನ ಉಪರಾಷ್ಟ್ರಪತಿ; ಮಾರ್ಗರೆಟ್ ಆಳ್ವ ಸೋಲು

528 ಮತ ಪಡೆದ ಎನ್‌ಡಿಎ ಅಭ್ಯರ್ಥಿ; ಮಾರ್ಗರೆಟ್ ಆಳ್ವ ಸೋಲು

ಪಿಟಿಐ
Published 6 ಆಗಸ್ಟ್ 2022, 20:45 IST
Last Updated 6 ಆಗಸ್ಟ್ 2022, 20:45 IST
ಪ್ರಧಾನಿ ನರೇಂದ್ರ ಮೋದಿ ಅವರು ಧನಕರ್ ಅವರಿಗೆ ಶುಭಾಶಯ ಕೋರಿದರು  –ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಧನಕರ್ ಅವರಿಗೆ ಶುಭಾಶಯ ಕೋರಿದರು  –ಪಿಟಿಐ ಚಿತ್ರ   

ನವದೆಹಲಿ: ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಅವರು ನಿರೀಕ್ಷೆಯಂತೆಯೇ ದೇಶದ 14ನೇ ಉಪರಾಷ್ಟ್ರಪತಿಯಾಗಿ ಶನಿವಾರ ಚುನಾಯಿತರಾಗಿದ್ದಾರೆ. ಧನಕರ್ ಅವರು 528 ಮತಗಳನ್ನು ಪಡೆದು ಭಾರಿ ಅಂತರದಿಂದ ಗೆದ್ದರು. ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್‌ನ ಮಾರ್ಗರೆಟ್ ಆಳ್ವ ಅವರಿಗೆ 182 ಮತಗಳಷ್ಟೇ ಸಿಕ್ಕಿದವು.

ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತ ಹಾಗೂ ರಾಜ್ಯಸಭೆಯಲ್ಲಿ 91 ಸದಸ್ಯರ ಬಲ ಇದ್ದಿದ್ದರಿಂದ ಧನಕರ್ ಅವರ ಗೆಲುವು ನಿಶ್ಚಿತವಾಗಿತ್ತು. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ ಅವರ ನಿವಾಸದಲ್ಲಿ, ಧನಕರ್ ಅವರ ಗೆಲುವು ಘೋಷಣೆಯಾಗುವ ಮುನ್ನವೇ ಸಂಭ್ರಮಾಚರಣೆ ನಡೆದಿತ್ತು. ಇದರಲ್ಲಿ ಧನಕರ್ ಭಾಗಿಯಾಗಿದ್ದರು. ಫಲಿತಾಂಶ ಪ್ರಕಟವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಧನಕರ್ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದರು.

ರಾಜ್ಯಸಭೆಯ ಸಭಾಪತಿಯಾಗಿ ಹಲವು ಕಠಿಣ ಸಂದರ್ಭಗಳನ್ನು ನಿಭಾಯಿಸಿದ್ದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಇದೇ 10ರಂದು ಮುಗಿಯಲಿದ್ದು, ಧನಕರ್ ಅವರು 11ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ADVERTISEMENT

ಉಪರಾಷ್ಟ್ರಪತಿ ಚುನಾವಣೆಯಲ್ಲಿ 725 ಸಂಸದರು ಮತ ಚಲಾಯಿಸಿದ್ದರು. ಈ ಪೈಕಿ 15 ಮತಗಳು ಅಸಿಂಧುಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಸತ್ತಿನಲ್ಲಿ, ನಾಮನಿರ್ದೇಶಿತರೂ ಸೇರಿ 788 ಸದಸ್ಯರಿದ್ದಾರೆ. ರಾಜ್ಯಸಭೆಯ 8 ಸ್ಥಾನಗಳು ಖಾಲಿಯಿವೆ. ಮತದಾನದಿಂದ ಟಿಎಂಸಿ ದೂರ
ವುಳಿದಿದ್ದರೂ ಇಬ್ಬರು ಸಂಸದರು ಮತ ಚಲಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.