ADVERTISEMENT

ಜೈನ ಮುನಿ ತರುಣ ಸಾಗರ ಮಹಾರಾಜ್‌ ನಿಧನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 18:03 IST
Last Updated 1 ಸೆಪ್ಟೆಂಬರ್ 2018, 18:03 IST
   

ನವದೆಹಲಿ:ದಿಗಂಬರ ಜೈನ ಮುನಿ ತರುಣ ಸಾಗರ ಅವರು ಶನಿವಾರ ಬೆಳಿಗ್ಗೆ ದೆಹಲಿಯಲ್ಲಿ ನಿಧನರಾಗಿದ್ದಾರೆ.

ತರುಣ ಸಾಗರ ಅವರಿಗೆ 51 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಪೂರ್ವ ದೆಹಲಿಯ ಕೃಷ್ಣ ನಗರ ಪ್ರದೇಶದಲ್ಲಿರುವ ರಾಧಾಪುರಿ ಜೈನ ಮಂದಿರದಲ್ಲಿ ಇಂದು ಬೆಳಗಿನಜಾವ 3ಕ್ಕೆ ಕೊನೆಯುಸಿರೆಳೆದಿದ್ದಾರೆ.

ADVERTISEMENT

ಜೈನ ಮುನಿಯಾಗಿದ್ದರೂ, ಜೈನ ಸಮಾಜದ ಆಚೆಗಿನ ಜನರ ಜತೆ ಉತ್ತಮ ಒಡನಾಟವನ್ನು ಅವರು ಹೊಂದಿದ್ದರು.

ವಿಧಾನಸಭೆಯ ಅಧಿವೇಶನ ಜೈನ ಮುನಿ ತರುಣ ಸಾಗರ ಅವರಿಂದ ಪ್ರವಚನ.

ಪ್ರವಚನ ಮೂಲಕ ಅಧಿವೇಶನಕ್ಕೆ ವಿಶಿಷ್ಟವಾಗಿ ಚಾಲನೆ ನೀಡಿದ್ದ ಮುನಿ
ತರುಣ ಸಾಗರ ಮಹಾರಾಜ್ ಅವರ ಪ್ರವಚನದ ಮೂಲಕ ಹರಿಯಾಣ ವಿಧಾನಸಭೆಯ ಚಳಿಗಾಲದ ಅಧಿವೇಶನ ವಿಶಿಷ್ಟವಾಗಿ ಆರಂಭವಾಗಿತ್ತು. ಚಂಡೀಗಢದ ವಿಧಾನ ಸಭೆಯ ಸಭಾಂಗಣದಲ್ಲಿ ತರುಣ ಸಾಗರ ಅವರ ಕಡ್ವೆ ಪ್ರವಚನ (ಕಟು ಪ್ರವಚನ) ನಡೆದಿದ್ದು, ಜೈನ ಮುನಿ ಸಚಿವ ಶಾಸಕರನ್ನುದ್ದೇಶಿಸಿ ಸುಮಾರು 40 ನಿಮಿಷಗಳ ಪ್ರವಚನ ನೀಡಿದ್ದರು. ಈ ಮಟ್ಟಿಗೆ ಅವರು ಹೆಚ್ಚು ಪ್ರಭಾವಿತರಾಗಿದ್ದರು.

ಪಾಕಿಸ್ತಾನದ ಬಗ್ಗೆಯೂ ಉಲ್ಲೇಖಿಸಿದ್ದ ಅವರು,ಅದು ನಮ್ಮ ಪಕ್ಕದ ದೇಶ, ಅದು ಎಲ್ಲರಿಗೂ ಗೊತ್ತಿರುವ ವಿಷಯವೇ. ಭಯೋತ್ಪಾದನೆಗೆ ಉತ್ತೇಜನ ನೀಡುವುದು, ಭಾರತಕ್ಕೆ ತೊಂದರೆ ಕೊಡುವುದಕ್ಕಾಗಿಯೇ ಬ್ರಹ್ಮಾಸುರರನ್ನು ಹುಟ್ಟಿಸುತ್ತಿದ್ದೆ. ಒಂದು ದಿನ ಪಾಕಿಸ್ತಾನ ತಮಗಾಗಿಯೇ ಬ್ರಹ್ಮಾಸುರರನ್ನು ತಯಾರು ಮಾಡಲಿದೆ.ಉದ್ದೇಶಪೂರ್ವಕ ಅಲ್ಲದೇ ತಪ್ಪು ಮಾಡಿದರೆ ಅಗ್ಯಾನ್(ಅಜ್ಞಾನಿ), ಎರಡನೇ ಬಾರಿ ಅದೇ ತಪ್ಪು ಮಾಡಿದರೆ ನಾದಾನ್(ಅವಿವೇಕಿ), ಎರಡಕ್ಕಿಂತ ಹೆಚ್ಚು ಬಾರಿ ಮಾಡಿದರೆ ಶೈತಾನ್(ದೆವ್ವ), ನಿರಂತರವಾಗಿ ಮಾಡುತ್ತಲೇ ಇದ್ದರೆ ಪಾಕಿಸ್ತಾನ್, ಸದಾ ಕ್ಷಮಿಸುತ್ತಲೇ ಇರುವುದು ಹಿಂದೂಸ್ತಾನ್! ಎಂದು ಅವರು ತಮ್ಮ ಪ್ರವಚನದಲ್ಲಿ ಪ್ರತಿಪಾದಿಸಿದ್ದರು.

* ಇದನ್ನೂ ಓದಿ...

ಧರ್ಮ ಎಂಬುದು ಗಂಡನಂತೆ, ರಾಜಕಾರಣ ಹೆಂಡತಿ. ತನ್ನ ಹೆಂಡತಿಯನ್ನು ರಕ್ಷಿಸಬೇಕಾದ ಕರ್ತವ್ಯ ಗಂಡನಿಗೆ ಇರುತ್ತದೆ. ಗಂಡನಿಗೆ ಶಿಸ್ತುಬದ್ಧವಾಗಿ ನಡೆದುಕೊಳ್ಳುವುದು ಹೆಂಡತಿಯ ಕರ್ತವ್ಯ. ರಾಜಕಾರಣದ ಮೇಲೆ ಧರ್ಮದ ಅಂಕುಶ ಇಲ್ಲದೇ ಇದ್ದರೆ ಅದು ಪುಂಡಾನೆಯ ರೀತಿ ಆಗಿ ಬಿಡುತ್ತದೆ ಎಂದು ತರುಣ ಸಾಗರ ಅವರು ಪ್ರವಚನದಲ್ಲಿ ರಾಜಕಾರಣಿಗಳಿಗೆ ಪಾಠವನ್ನೂ ಮಾಡಿದ್ದರು.
**
ಜೈನ ಮುನಿಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರು ಕಂಬನಿ ಮಿಡಿದಿದ್ದಾರೆ.

‘ ತರುಣ ಸಾಗರ್‌ಜಿ ಮಹಾರಾಜ್‌ ಅವರ ಅಕಾಲಿಕ ಸಾವು ತೀವ್ರ ನೋವುಂಟುಮಾಡಿದೆ. ಅವರು ಪ್ರತಿಪಾದಿಸಿದ ಅದ್ಭುತ ಚಿಂತನೆಗಳು, ಸಮಾಜಕ್ಕೆ ನೀಡಿದ ಕೊಡುಗೆಯನ್ನು ನಾವು ಪ್ರತಿದಿನ ಸ್ಮರಿಸುತ್ತೇವೆ. ಅವರ ಪ್ರೇರಣಾದಾಯಿ ಮಾತುಗಳು ಜನರಿಗೆ ಮುಂದೆಯೂ ಸ್ಫೂರ್ತಿ ತುಂಬಲಿದೆ’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಕಾಂಗ್ರೆಸ್‌ ಪಕ್ಷ ಕೂಡ ಟ್ವಿಟರ್‌ ಮೂಲಕ ತರುಣ್‌ ಸಾಗರ್‌ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.