ಜೈಪುರ: ‘ಸಂವಿಧಾನ ಜಾರಿಗೆ ಬರುವ ಮುನ್ನವೇ ಭಾರತದಲ್ಲಿ ರಾಷ್ಟ್ರೀಯ ಪರಿಕಲ್ಪನೆ ಅಸ್ತಿತ್ವದಲ್ಲಿದ್ದುದು ಐತಿಹಾಸಿಕ ಸತ್ಯ. ಅಂತಹ ರಾಷ್ಟ್ರೀಯ ಮನೋಭಾವವನ್ನು ಹಾಳುಮಾಡುವ ಯತ್ನಕ್ಕೆ ದೇಶದ ಕೆಲವು ವಿಶ್ವವಿದ್ಯಾಲಯಗಳು ಈಗ ಕೈಹಾಕಿವೆ’ ಎಂದು ಹಿರಿಯ ಪತ್ರಕರ್ತ, ಬಿಜೆಪಿಯ ರಾಜ್ಯಸಭಾ ಸದಸ್ಯ ಸ್ವಪನ್ ದಾಸ್ಗುಪ್ತ ವಾಗ್ದಾಳಿ ನಡೆಸಿದರು.
ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಗಣರಾಜ್ಯೋತ್ಸವ ದಿನವಾದ ಭಾನುವಾರ ನಡೆದ ‘ಬಲಪಂಥೀಯ ದೃಷ್ಟಿ: ಎಚ್ಚರಗೊಳ್ಳುತ್ತಿದ್ದಾಳೆ ಭಾರತ ಮಾತೆ’ ಗೋಷ್ಠಿ ಸಂವಿಧಾನದ ಕುರಿತ ಚರ್ಚೆಗೂ ವೇದಿಕೆ ಒದಗಿಸಿತು.
‘ಸಂವಿಧಾನ ಮುಖ್ಯ ನಿಜ. ಆದರೆ, ಸಂವಿಧಾನ ಪ್ರತಿಪಾದಿಸುವಂತಹ ರಾಷ್ಟ್ರೀಯತೆ, ಅದು 1950ರಲ್ಲಿ ಜಾರಿಗೆ ಬರುವುದಕ್ಕಿಂತ ತುಂಬಾ ಮೊದಲೇ ದೇಶದಲ್ಲಿ ಇತ್ತು. ಅಂತಹ ಮೌಲ್ಯಗಳ ಪುನರುತ್ಥಾನದ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡುತ್ತಿದೆ’ ಎಂದು ದಾಸ್ಗುಪ್ತ ಪ್ರತಿಪಾದಿಸಿದರು.
‘ದೇಶದಲ್ಲಿ ಶೇ 80ರಷ್ಟು ಜನ ಹಿಂದೂಗಳಿದ್ದರೂ ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತರನ್ನೇ ಓಲೈಸುತ್ತಾ ಬಂತು. ಆ ನಿಲುವಿನ ವಿರುದ್ಧದ ಸಿಟ್ಟು ಹರಳುಗಟ್ಟುತ್ತಾ ಹೋದಂತೆ 2014ರಲ್ಲಿ ಮೋದಿ ಭಾರತದ ಹೃದಯ ಸಾಮ್ರಾಟನಾಗಿ ಹೊರಹೊಮ್ಮಿದರು’ ಎಂದರು.
ಸಂವಾದದಲ್ಲಿ ಮಕರಂದ ಆರ್. ಪರಾಂಜಪೆ ಅವರೂ ಪಾಲ್ಗೊಂಡಿದ್ದರು. ‘ಸಿಎಎಯಿಂದ ಭಾರತೀಯ ಪ್ರಜೆಗಳಿಗೆ ಏನೂ ತೊಂದರೆ ಇಲ್ಲ ಎಂದಾದರೆ ಅದನ್ನು ವಿರೋಧಿಸುವವರಿಗೆ ಏನು ಬೇಕಿದೆ’ ಎಂಬ ಪ್ರಶ್ನೆ ಎದುರಾಯಿತು. ‘ಮೋದಿ ಸರ್ಕಾರವನ್ನು ತೆಗೆದುಹಾಕುವುದಲ್ಲದೆ ಇನ್ನೇನು’ ಎಂದು ಪರಾಂಜಪೆ ಉತ್ತರ ರೂಪವಾಗಿ ಮರುಪ್ರಶ್ನೆ ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.