ADVERTISEMENT

ಜಮ್ಮುವಿನ ಕಿಶ್ತವಾರ್‌‌ನಲ್ಲಿ ಮೇಘ ಸ್ಫೋಟ: ಐವರ ಸಾವು, 25 ಮಂದಿ ನಾಪತ್ತೆ

ಜಮ್ಮು–ಕಾಶ್ಮೀರದಲ್ಲಿ ಅವಘಡ: ರಕ್ಷಣಾ ಕಾರ್ಯಾಚರಣೆ ಚುರುಕು

ಪಿಟಿಐ
Published 28 ಜುಲೈ 2021, 5:45 IST
Last Updated 28 ಜುಲೈ 2021, 5:45 IST
ಜಮ್ಮು–ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಸಮೀಪದ ಬಸಂತಾರ್‌ ನದಿ ಭರ್ತಿಯಾಗಿ ಪ್ರವಾಹ ಉಂಟಾಗಿದ್ದ ಪ್ರದೇಶದಲ್ಲಿಯೇ ಗಡಿ ಭದ್ರತಾ ಪಡೆಯ ಯೋಧರು ಮಂಗಳವಾರ ಗಸ್ತು ತಿರುಗಿದರು  ಪಿಟಿಐ ಚಿತ್ರ
ಜಮ್ಮು–ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಸಮೀಪದ ಬಸಂತಾರ್‌ ನದಿ ಭರ್ತಿಯಾಗಿ ಪ್ರವಾಹ ಉಂಟಾಗಿದ್ದ ಪ್ರದೇಶದಲ್ಲಿಯೇ ಗಡಿ ಭದ್ರತಾ ಪಡೆಯ ಯೋಧರು ಮಂಗಳವಾರ ಗಸ್ತು ತಿರುಗಿದರು  ಪಿಟಿಐ ಚಿತ್ರ   

ಜಮ್ಮು: ಮೇಘ ಸ್ಫೋಟದಿಂದ ಉಂಟಾದ ದಿಢೀರ್‌ ಪ್ರವಾಹದಿಂದಾಗಿ ಐವರು ಸಾವಿಗೀಡಾಗಿದ್ದು, 25ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕಿಶ್ತವಾರ್‌ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದೆ.

ದಚ್ಚನ್‌ ತಾಲ್ಲೂಕಿನ ಹೊಂಝಾರ್‌ ಗ್ರಾಮದಲ್ಲಿ ದಿಢೀರ್‌ ಪ್ರವಾಹ ಸಂಭವಿಸಿದ್ದು, ಐದು ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಪ್ರವಾಹದಲ್ಲಿ ಆರು ಮನೆಗಳು ಕೊಚ್ಚಿ ಹೋಗಿವೆ ಎಂದು ಜಿಲ್ಲಾ ಅಭಿವೃದ್ಧಿ ಆಯುಕ್ತ ಅಶೋಕ್‌ ಕುಮಾರ್‌ ಶರ್ಮಾ ತಿಳಿಸಿದ್ದಾರೆ.

ಸೇನೆ, ಪೊಲೀಸ್‌ ಮತ್ತು ಎಸ್‌ಡಿಆರ್‌ಎಫ್‌ ತಂಡಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. 60 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಲಂಬಾರ್ಡ್‌ ಪ್ರದೇಶದಲ್ಲೂ ಮಂಗಳವಾರ ರಾತ್ರಿ ಮೇಘ ಸ್ಫೋಟ ಸಂಭವಿಸಿದೆ. ಆದರೆ, ಹಾನಿ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಜಮ್ಮುನ ಬಹುತೇಕ ಭಾಗಗಳಲ್ಲಿ ಕೆಲವು ದಿನಗಳಿಂದ ಸತತ ಮಳೆಯಾಗುತ್ತಿದೆ. ಈ ವಾರದ ಅಂತ್ಯದವರೆಗೂ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ, ನದಿ ತೀರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.