ಶ್ರೀನಗರ: ಮೂರು ತಿಂಗಳ ನಂತರ ಕಾಶ್ಮೀರದಲ್ಲಿ ಮತ್ತೆ ರೈಲು ಮತ್ತು ಬಸ್ ಸೇವೆಗಳು ಮಂಗಳವಾರ ಪುನರಾರಂಭಗೊಂಡಿವೆ.
370ನೇ ವಿಧಿ ರದ್ದತಿಯಿಂದಾಗಿ ಕಣಿವೆಯಲ್ಲಿ ಪ್ರಕ್ಷುಬ್ದ ಸ್ಥಿತಿ ನೆಲೆಗೊಂಡಿತ್ತು. ಭದ್ರತಾ ಕಾರಣಗಳಿಗಾಗಿ ಸಂಚಾರ ಸೇವೆಗಳನ್ನು ಮೊಟಕುಗೊಳಿಸಲಾಗಿತ್ತು. ಇದೀಗ ಕಣಿವೆ ಸಹಜ ಸ್ಥಿತಿಗೆ ಮರಳುತ್ತಿದ್ದು, ರೈಲು ಸೇವೆಗಳನ್ನು ಮತ್ತೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾರಾಮುಲ್ಲಾ– ಶ್ರೀನಗರ ನಡುವೆ ರೈಲು ಸಂಚಾರ ಇದೀಗ ಆರಂಭವಾಗಿದೆ. ಭದ್ರತಾ ಕಾರಣಗಳಿಗಾಗಿ ದಿನದಲ್ಲಿ ಎರಡು ಬಾರಿ ಮಾತ್ರ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲವೇ ದಿನಗಳಲ್ಲಿ ಶ್ರೀನಗರ– ಬನಿಹಾಲ್ ನಡುವೆಯೂರೈಲು ಸಂಚಾರ ಪುನರಾರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
ಬಟ್ವಾರ– ಬಟ್ಮಾಲೂ ನಡುವೆ ಮಿನಿ ಬಸ್ಗಳ ಸಂಚಾರ ಸೇವೆ ಇರಲಿಲ್ಲ. ಪ್ರಯಾಣಕ್ಕೆ ನಾಗರಿಕರುಕ್ಯಾಬ್ ಮತ್ತು ಆಟೊರಿಕ್ಷಾಗಳನ್ನು ಅವಲಂಬಿಸಿದ್ದರು. ಇದೀಗ ಬಸ್ ಸೇವೆಗಳೂ ಲಭ್ಯವಾಗಿವೆ.
ಪ್ರತಿಭಟನೆ: ಮಾರುಕಟ್ಟೆಯ ವಹಿವಾಟು ಅವಧಿ ಬದಲಾವಣೆಯಾಗಿದ್ದು, ವ್ಯಾಪಾರಿಗಳು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಾತ್ರ ಮಳಿಗೆಗಳನ್ನು ತೆರೆದಿರುತ್ತಾರೆ. ನಂತರ ಪ್ರತಿಭಟನೆಗಳು ಕಾವೇರುತ್ತವೆ. ಮಳಿಗೆಗಳನ್ನು ಮುಚ್ಚುವಂತೆ ಪ್ರತಿಭಟನಕಾರರು ಮತ್ತು ಉಗ್ರರು ವ್ಯಾಪಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.