ಪ್ರಾತಿನಿಧಿಕ ಚಿತ್ರ
ಶ್ರೀನಗರ: ಅರುಂಧತಿ ರಾಯ್, ಎ.ಜಿ. ನೂರಾನಿ, ವಿಕ್ಟೋರಿಯಾ ಸ್ಕೊಫೀಲ್ಡ್, ಮೌಲಾನಾ ಮೌದೂದಿ ಮತ್ತು ಡೇವಿಡ್ ದೇವದಾಸ್ ಸೇರಿ ಹಲವು ಖ್ಯಾತ ಲೇಖಕರ ಸುಮಾರು 25 ಕೃತಿಗಳು, ‘ಜಮ್ಮು–ಕಾಶ್ಮೀರದ ಕುರಿತು ತಪ್ಪು ಸಂಕಥನ ಸೃಷ್ಟಿಸುತ್ತಿವೆ. ಜೊತೆಗೆ ಭಯೋತ್ಪಾನೆಯನ್ನು ವೈಭವೀಕರಿಸುತ್ತಿವೆ’ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಗೃಹ ಸಚಿವಾಲಯ ಗುರುತಿಸಿದೆ.
ಈ ಪುಸ್ತಕಗಳನ್ನು ನಿಷೇಧಿಸಿ ಸಚಿವಾಲಯವು ಬುಧವಾರ ಆದೇಶ ಹೊರಡಿಸಿದೆ. ‘ಕೆಲವು ಪುಸ್ತಕಗಳು ತಪ್ಪು ಸಂಕಥನವನ್ನು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದವನ್ನು ಪ್ರಚಾರ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ತನಿಖೆ ಮತ್ತು ಗುಪ್ತಚರ ಮಾಹಿತಿಗಳು ಈ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸಿವೆ’ ಎಂದು ಆದೇಶದಲ್ಲಿ ಹೇಳಲಾಗಿದೆ.
‘ಇಂಥ ಪುಸ್ತಕಗಳಿಂದ ಯುವಕರು ಹಿಂಸಾಚಾರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಯುವಕರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ, ಭಯೋತ್ಪಾದನೆಯನ್ನು ವೈಭವೀಕರಿಸಲಾಗುತ್ತಿದೆ ಮತ್ತು ಭಾರತದ ವಿರುದ್ಧ ಹಿಂಸೆಯನ್ನು ಪ್ರಚೋದಿಸಲಾಗುತ್ತಿದೆ. ಸಂಕಟಗಳ ಸಂಸ್ಕೃತಿ, ಸಂತ್ರಸ್ತಭಾವ ಮತ್ತು ಭಯೋತ್ಪಾದಕರು ಹೀರೊಗಳು ಎನ್ನುವಂಥ ಅಭಿಪ್ರಾಯಗಳು ಮೂಡುವಂತೆ ಯುವಕರ ಮನೋಭಾವವನ್ನು ಈ ಪುಸ್ತಕಗಳು ಪ್ರಭಾವಿಸುತ್ತಿವೆ’ ಎಂದು ಹೇಳಿದೆ.
‘ಈ ರೀತಿ ಮಾಡುವುದು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಇದು ಅಪರಾಧ’ ಎಂದೂ ಹೇಳಿದೆ.
ಮಾಜಿ ಪ್ರಧಾನಿ ವಾಜಪೇಯಿ ಅವರ ಶಾಂತಿ ಮಾತುಕತೆಯ ಸ್ಫೂರ್ತಿಯಲ್ಲಿಯೇ ನನ್ನ ಪುಸ್ತಕಗಳು ಶಾಂತಿ ಸ್ಥಾಪನೆಯನ್ನು, ಮಾತುಕತೆ ಮತ್ತು ಪ್ರಜಾಪ್ರಭುತ್ವವನ್ನು ತೀವ್ರವಾಗಿ ಪ್ರತಿಪಾದಿಸುತ್ತವೆ. ಪ್ರತ್ಯೇಕತಾವಾದವನ್ನು ಪ್ರತಿಪಾದಿಸದೆಯೇ ಕಾಶ್ಮೀರದಲ್ಲಿ ಏನಾಗುತ್ತಿದೆ ಎಂಬುದನ್ನು ನನ್ನ ಪುಸ್ತಕ ಹೇಳುತ್ತದೆ.– ಡೇವಿಡ್ ದೇವದಾಸ್, ನಿಷೇಧಿಸಲಾದ ‘ಇನ್ ಸರ್ಚ್ ಆಫ್ ಫ್ಯೂಚರ್’ ಕೃತಿಯ ಲೇಖಕ
ಶಾಂತಿಯುತ ಪ್ರಕ್ರಿಯೆಗಳನ್ನು ಪ್ರತಿಪಾದಿಸಲು ನಾನು ಬದ್ಧ. ಸಶಸ್ತ್ರ ಸಂಘರ್ಷಗಳ ಕುರಿತು ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೂ ನಾನು ಬದ್ಧ. ಅದು ಕಾಶ್ಮೀರದಲ್ಲೇ ಆಗಲಿ, ಜಗತ್ತಿನ ಯಾವುದೇ ಭಾಗದಲ್ಲಾಗಲಿ..– ಸುಮಂತ್ರ ಬೋಸ್, ನಿಷೇಧಿತ ‘ಕಾಶ್ಮೀರ್ ಅಟ್ ದಿ ಕ್ರಾಸ್ರೋಡ್ಸ್: ಇನ್ಸೈಡ್ ಎ 21 ಸೆಂಚೂರಿ ಕಾನ್ಫ್ಲಿಕ್ಟ್’ ಕೃತಿಯ ಲೇಖಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.