ನವದೆಹಲಿ: ಪಾಕಿಸ್ತಾನ ಹಾಗೂ ಭಾರತದ ಗಡಿನಿಯಂತ್ರಣ ರೇಖೆಯ ಸಮೀಪವೆ ದೇಶದೊಳಗೆ ನುಸುಳುತ್ತಿದ್ದ ಇಬ್ಬರು ಲಷ್ಕರ್ ಉಗ್ರರು ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.
ಕುಪ್ವಾರಾ ಜಿಲ್ಲೆಯಲ್ಲಿ ಶನಿವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಜಾರಿಗೆ ಬಂದ ವಾರ್ಷಿಕೋತ್ಸವ ಆಚರಿಸುವ ಸಂದರ್ಭದಲ್ಲಿ ಅಶಾಂತಿ ಉಂಟು ಮಾಡುವ ಸಲುವಾಗಿ ಕೃತ್ಯ ಎಸಗಲು ಇವರು ಉದ್ದೇಶಿಸಿದ್ದರು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಇವರಲ್ಲಿ ಒಬ್ಬಾತನನ್ನು 23 ವರ್ಷದ ಇದ್ರೀಸ್ ಅಹಮದ್ ಭಟ್ ಎಂದು ಗುರುತಿಸಲಾಗಿದೆ. ನಾವು ಸಮಾಜಘಾತಕ ಕೃತ್ಯಗಳನ್ನು ನಡೆಸಲು ಯತ್ನಿಸುತ್ತಿರುವ ಗುಂಪನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಇದು ಲಷ್ಕರ್ ಗುಂಪು ಕೂಡ ಆಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರಿಂದ ಎಕೆ47 ರೈಫಲ್, ಗುಂಡುಗಳು, ಗ್ರೆನೇಡ್ ಸೇರಿದಂತೆ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಒಂದು ಚೀನಾ ನಿರ್ಮಿತ ಪಿಸ್ತೂಲು, ಪಾಕಿಸ್ತಾನ ನಿರ್ಮಿತ ಗ್ರೆನೇಡ್ಗಳು ದೊರೆತಿವೆ. ಈ ಗ್ರೆನೇಡ್ಗಳೇ ಉಗ್ರರಿಗೂ ಪಾಕಿಸ್ತಾನಕ್ಕೂ ಇರುವ ಸಂಬಂಧಕ್ಕೆ ಪ್ರಮುಖ ಸಾಕ್ಷಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೀತಿಯ ಗ್ರೆನೇಡ್ಗಳು 2001ರಲ್ಲಿ ಸಂಸತ್ ಮೇಲಿನ ದಾಳಿ ಸಮಯದಲ್ಲಿ ಜೈಷ್ ಇ ಮಹಮದ್ ಸಂಘಟನೆಯ ಉಗ್ರರು ಬಳಸಿದ್ದರು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.