ADVERTISEMENT

ಆಂಧ್ರ: ಪ್ರೇಮಿಯಿಂದ ದಂತ ವೈದ್ಯಕೀಯ ವಿದ್ಯಾರ್ಥಿನಿಯ ಹತ್ಯೆ

ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯ, ಪ್ರೇಮಕ್ಕೆ ತಿರುಗಿದ್ದ ಸ್ನೇಹ

ಪಿಟಿಐ
Published 6 ಡಿಸೆಂಬರ್ 2022, 12:31 IST
Last Updated 6 ಡಿಸೆಂಬರ್ 2022, 12:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮರಾವತಿ: ಪರಸ್ಪರರಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಹೋಗಲಾಡಿಸುವ ಯತ್ನದಲ್ಲಿ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಸಾಫ್ಟ್‌ವೇರ್ ಉದ್ಯೋಗಿಯೊಬ್ಬ ತನ್ನ ಗೆಳತಿ, ದಂತ ವೈದ್ಯಕೀಯ ವಿದ್ಯಾರ್ಥಿನಿಯ ಕತ್ತುಸೀಳಿ ಹತ್ಯೆ ಮಾಡಿದ ಘಟನೆ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ತಪಸ್ವಿ (20) ಹತ್ಯೆಗೊಳಗಾದ ದಂತ ವೈದ್ಯಕೀಯ ವಿದ್ಯಾರ್ಥಿನಿ. ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ತಪಸ್ವಿನಿ ಹಾಗೂ ಸಾಫ್ಟ್‌ವೇರ್ ಉದ್ಯೋಗಿ ಜ್ಞಾನೇಶ್ವರ್ ಪರಸ್ಪರ ಪರಿಚಯವಾಗಿದ್ದರು. ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಕೆಲವೇ ತಿಂಗಳುಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.

ಭಿನ್ನಾಭಿಪ್ರಾಯ ಹೋಗಲಾಡಿಸಲು ಜ್ಞಾನೇಶ್ವರ್ ಪ್ರಯತ್ನಿಸುತ್ತಿದ್ದು, ತಪಸ್ವಿ ಆತನನ್ನು ದೂರವಿಟ್ಟಿದ್ದರು. ಈ ಸಂಬಂಧ ಒಂದೆರಡು ತಿಂಗಳ ಹಿಂದೆ ವಿಜಯವಾಡ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ಜ್ಞಾನೇಶ್ವರ್‌ನನ್ನು ಕರೆಸಿದ್ದ ಪೊಲೀಸರು ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.

ADVERTISEMENT

ಒಂದು ವಾರದ ಹಿಂದೆಯಷ್ಟೇತಪಸ್ವಿ ತನ್ನ ಗೆಳತಿಯೊಂದಿಗೆ ಗುಂಟೂರು ಸಮೀಪದ ತಕ್ಕೆಲ್ಲಪಡು ಎಂಬಲ್ಲಿ ವಾಸವಾಗಿದ್ದರು. ಇದನ್ನು ತಿಳಿದ ಜ್ಞಾನೇಶ್ವರ್ ಸೋಮವಾರ ರಾತ್ರಿ ತಪಸ್ವಿಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದ.ಇಬ್ಬರ ನಡುವಿನ ಮಾತುಕತೆ ತಾರಕಕ್ಕೇರಿದ್ದು, ಈ ವೇಳೆ ಜ್ಞಾನೇಶ್ವರ ಸರ್ಜಿಕಲ್ ಚಾಕುವಿನಿಂದ ತಪಸ್ವಿನಿಯ ಕತ್ತು ಸೀಳಿದ್ದ. ಭಯಗೊಂಡಿದ್ದ ತಪಸ್ವಿಯ ಗೆಳತಿ ರಕ್ಷಣೆಗಾಗಿ ನೆರೆಹೊರೆಯವರಿಗೆ ವಿಷಯ ತಿಳಿಸಲು ಹೊರಗೆ ಓಡಿದ್ದರು.

ಸ್ಥಳೀಯರು ಬಾಗಿಲು ಒಡೆದು ತೆರೆಯುವಷ್ಟರಲ್ಲಿ ರಕ್ತಸ್ರಾವದಿಂದ ಬಳಲುತ್ತಿದ್ದ ತಪಸ್ವಿಯನ್ನು ಜ್ಞಾನೇಶ್ವರ್ ಪಕ್ಕದ ಕೋಣೆಗೆ ಎಳೆದೊಯ್ದು ಬೀಗ ಹಾಕಿದ್ದ. ಸ್ಥಳೀಯರನ್ನು ನೋಡಿದ ಕೂಡಲೇ ಆತ ತನ್ನ ಮಣಿಕಟ್ಟನ್ನು ಚಾಕುವಿನಿಂದ ಕೊಯ್ದುಕೊಂಡ. ಆತನನ್ನು ಹಿಡಿದ ಸ್ಥಳೀಯರು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ತಪಸ್ವಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವಿಗೀಡಾದರು.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.