ADVERTISEMENT

‘ಸರ್ಕಾರದ ನಡೆ ಸಂವಿಧಾನ ಬಾಹಿರ’

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:45 IST
Last Updated 16 ಆಗಸ್ಟ್ 2019, 19:45 IST
   

ನವದೆಹಲಿ:ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಅಸಿಂಧುಗೊಳಿಸಿದ ರೀತಿ ಪ್ರಜಾಸತ್ತಾತ್ಮಕವಾಗಿರಲಿಲ್ಲ ಎಂದು 400ಕ್ಕೂ ಹೆಚ್ಚು ಸಾಮಾಜಿಕ ಹೋರಾಟಗಾರರು, ಕಲಾವಿದರು ಮತ್ತು ಖ್ಯಾತನಾಮರು ಶುಕ್ರವಾರ ಹೇಳಿಕೆ ನೀಡಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರವನ್ನು ವಿಭಜನೆ ಮಾಡಿದ ರೀತಿಯು ಭಾರತದ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲೆ ನಡೆಸಿದ ಹಲ್ಲೆಯೇ ಆಗಿದೆ. ಅಲ್ಲಿನ ಜನರಿಗೆ ಭಾರತವು ನೀಡಿದ್ದ ಮಾತನ್ನುಸರ್ಕಾರದ ಈ ನಡೆ ಉಲ್ಲಂಘಿಸುತ್ತದೆ. ಜಮ್ಮು ಮತ್ತು ಕಾಶ್ಮೀರವನ್ನು ನಾಶದತ್ತ ತಳ್ಳಲಾಗಿದೆ. ಭಾರತದ ಎಲ್ಲಾ ಪ್ರಾಂತಗಳಿಗೆ ಮುಂದೆ ಒದಗಲಿರುವ ಭಾರಿ ಆಪತ್ತನ್ನು ಇದು ಸೂಚಿಸುತ್ತಿದೆ’ಎಂದು ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

‘ಜಮ್ಮು ಮತ್ತು ಕಾಶ್ಮೀರದ ಜನರ ಜೀವನ ಸ್ಥಗಿತಗೊಂಡಿದೆ. ಅಲ್ಲಿನ ಬೀದಿಗಳು ನಿರ್ಜನವಾಗಿವೆ. ಸರ್ಕಾರದ ಈ ಪ್ರತಿಗಾಮಿ ಹೊಡೆತವು, ಅಲ್ಲಿನ ಜನರ ಜೀವ ಮತ್ತು ಸ್ವಾತಂತ್ರ್ಯವು ಅಪಾಯದಲ್ಲಿರುವುದನ್ನು ಸೂಚಿಸುತ್ತದೆ. ಸರ್ಕಾರವು ಅಲ್ಲಿ ನಿಯೋಜಿಸಿರುವ ಭದ್ರತಾ ಸಿಬ್ಬಂದಿಯನ್ನು ತಕ್ಷಣವೇ ವಾಪಸ್ ಕರೆಸಿಕೊಳ್ಳಬೇಕು. ಅಲ್ಲಿನ ಜನರ ಮೇಲಿನ ನಿರ್ಬಂಧಗಳನ್ನು ತಕ್ಷಣವೇ ರದ್ದು ಮಾಡಬೇಕು’ ಎಂದು ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.

ADVERTISEMENT

ನೌಕಾಪಡೆ ನಿವೃತ್ತ ಮುಖ್ಯಸ್ಥ ಅಡ್ಮಿರಲ್ ಎಲ್‌.ರಾಮದಾಸ್, ನರ್ಮದಾ ಬಚಾವೋ ಹೋರಾಟಗಾರ್ತಿ ಮೇಧಾ ಪಾಟ್ಕರ್, ಅರ್ಥಶಾಸ್ತ್ರಜ್ಞ ಜೀನ್ ಡ್ರೀಜ್‌,ಸಿಪಿಐ(ಎಂಎಲ್‌) ಸದಸ್ಯೆ ಕವಿತಾ ಕೃಷ್ಣನ್, ಸಾಮಾಜಿಕ ಹೋರಾಟಗಾರರಾದ ಮಧುರೇಶ್ ಕುಮಾರ್, ವಿಮಲಾ ಭಾಯಿ ಮತ್ತು ಕವಿ ಕೆ.ಸತ್‌ಚಿದಾನಂದನ್ ಅವರು ಈ ಹೇಳಿಕೆಗೆ ಸಹಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.