ಶ್ರೀನಗರ (ಪಿಟಿಐ):ಜಮ್ಮು ಮತ್ತು ಕಾಶ್ಮೀರ ಮತದಾರರ ಪಟ್ಟಿಗೆ ಹೊರಗಿನ ಮತದಾರರನ್ನು ಸೇರಿಸುವ ವಿಷಯದ ಬಗ್ಗೆ ಚರ್ಚಿಸಲು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಆ. 22 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ.
ನಗರದ ಗುಪ್ಕರ್ ಪ್ರದೇಶದಲ್ಲಿರುವ ಅಬ್ದುಲ್ಲಾ ನಿವಾಸದಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು,ಕೇಂದ್ರಾಡಳಿತ ಪ್ರದೇಶದಲ್ಲಿ ಹೊರಗಿನವರು ಮತದಾರರಾಗಿ ನೋಂದಾಯಿಸಿಕೊಳ್ಳಲು ಚುನಾವಣಾ ಆಯೋಗ ಅವಕಾಶ ನೀಡಿರುವ ಕುರಿತು ಮುಂದಿನ ಕ್ರಮದ ಬಗ್ಗೆ ಚರ್ಚಿಸಲಾಗುವುದು.
‘ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರಗಿನವರನ್ನು ಮತದಾರರ ಪಟ್ಟಿಗೆ ಸೇರಿಸುವ ಕುರಿತು ಕೇಂದ್ರ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದ ಹಿನ್ನೆಲೆಯಲ್ಲಿ ಡಾ.ಫಾರೂಖ್ ಅಬ್ದುಲ್ಲಾ ಸರ್ವ ಪಕ್ಷ ಸಭೆ ಕರೆದಿದ್ದಾರೆ. ಪ್ರಮುಖ ರಾಜಕೀಯ ಪಕ್ಷ (ಬಿಜೆಪಿ ಹೊರತುಪಡಿಸಿ)ಗಳ ಜತೆ ಮಾತನಾಡಿದ್ದು, ಸಭೆಗೆ ಆಹ್ವಾನಿಸಿದ್ದಾರೆ’ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಇಮ್ರಾನ್ ನಬಿ ದಾರ್ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಜಮ್ಮು ಮತ್ತು ಕಾಶ್ಮೀರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಹಿರ್ದೇಶ್ ಕುಮಾರ್ , 370ನೇ ವಿಧಿ ರದ್ಧತಿ ಬಳಿಕ ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಬಾರಿಗೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದ್ದು, ಹೊರಗಿನವರು ಸೇರಿದಂತೆ ಸುಮಾರು 25 ಲಕ್ಷ ಹೆಚ್ಚುವರಿ ಮತದಾರರು ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮಾತನಾಡಿ, ‘ಹೊರಗಿನವರನ್ನು ಮತದಾರರಾಗಿ ನೋಂದಾಯಿಸಲು ಅವಕಾಶ ನೀಡಿರುವುದು ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆದಂತೆ. ಉದ್ಯೋಗ, ಶಿಕ್ಷಣ ಅಥವಾ ವ್ಯಾಪಾರಕ್ಕಾಗಿ ಹೊರಗಿನವರಿಗೆ ಅವಕಾಶ ನೀಡುವ ಚುನಾವಣಾ ಅಧಿಕಾರಿಗಳ ಕ್ರಮ ಪ್ರಜಾಪ್ರಭುತ್ವ ಕೊನೆಗಾಣಿಸುವ ಗುರಿ ಹೊಂದಿದೆ.ಬಿಜೆಪಿ ತನ್ನ ಪ್ರಯೋಗಗಳಿಗೆ ಜಮ್ಮು ಮತ್ತು ಕಾಶ್ಮೀರವನ್ನು ಪ್ರಯೋಗಾಲಯವಾಗಿ ಪರಿವರ್ತಿಸಿದೆ’ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.