ನವದೆಹಲಿ: ಪ್ರಾದೇಶಿಕ ಹಾಗೂ ಸಂಸ್ಕೃತಿ ಆಧಾರದ ಮೇಲೆ ವಿದ್ಯಾರ್ಥಿನಿಲಯದಲ್ಲಿ ಮೀಸಲಾತಿ ನೀಡುವುದಿಲ್ಲ ಎಂದು ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್ಯು) ತಿಳಿಸಿದೆ.
ಹೊಸದಾಗಿ ಉದ್ಘಾಟನೆಗೊಂಡ ಬರಾಕ್ ವಿದ್ಯಾರ್ಥಿನಿಲಯದಲ್ಲಿ ಸೀಟುಗಳನ್ನು ಕಾಯ್ದಿರಿಸಬೇಕು ಎಂಬ ಬೇಡಿಕೆಗಳ ಮಧ್ಯೆ ಜೆಎನ್ಯು ಈ ಸ್ಪಷ್ಟನೆ ನೀಡಿದ್ದು, ಅಧಿಕೃತ ನಿರ್ದೇಶನಗಳಿಗೆ ಅನುಗುಣವಾಗಿ ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಈ ಹಾಸ್ಟೆಲ್ನಲ್ಲಿ ಆದ್ಯತೆ ನೀಡಲಾಗಿದೆ ಎಂದಿದೆ.
ವಿದ್ಯಾರ್ಥಿನಿಲಯದಲ್ಲಿನ ಸೀಟುಗಳ ಹಂಚಿಕೆಯ ಪ್ರಕ್ರಿಯೆಯು ಏ. 8ರಿಂದ ಹಂತ ಹಂತವಾಗಿ ಆರಂಭಗೊಂಡಿದ್ದು, ಬರಾಕ್ ಹಾಸ್ಟೆಲ್ನಲ್ಲಿ ಈಶಾನ್ಯದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ವಿ.ವಿ. ತಿಳಿಸಿದೆ.
ಹೊಸ ಹಾಸ್ಟೆಲ್ ಸೇರಿದಂತೆ ವಿ.ವಿ.ಯ ಎಲ್ಲ ಹಾಸ್ಟೆಲ್ಗಳಲ್ಲೂ ಈಗಿರುವ ನೀತಿಯನ್ನೇ ಮುಂದುವರಿಸಲಾಗುವುದು ಎಂದಿದೆ.
ಬರಾಕ್ ವಿದ್ಯಾರ್ಥಿನಿಲಯದ ಶೇ 75ರಷ್ಟು ಸೀಟುಗಳನ್ನು ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿ ಈಶಾನ್ಯ ವಿದ್ಯಾರ್ಥಿಗಳ ವೇದಿಕೆ (ಎನ್ಇಎಸ್ಎಫ್) ಹಾಸ್ಟೆಲ್ ಉದ್ಘಾಟನೆ ಸಂದರ್ಭದಲ್ಲಿ ಮೌನ ಪ್ರತಿಭಟನೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.