ADVERTISEMENT

ಜೋಶಿಮಠ ಬಿಕ್ಕಟ್ಟು: ಬದರಿನಾಥ್‌ ಮಾರ್ಗ ಬಂದ್‌ ಮಾಡುತ್ತೇವೆ ಎಂದು ಬೆದರಿಕೆ

ಪಿಟಿಐ
Published 5 ಏಪ್ರಿಲ್ 2023, 14:17 IST
Last Updated 5 ಏಪ್ರಿಲ್ 2023, 14:17 IST
ಬದರಿನಾಥ್‌ ದೇವಾಲಯ
ಬದರಿನಾಥ್‌ ದೇವಾಲಯ   

ಗೋಪೇಶ್ವರ: ಇದೇ 27ರ ಮೊದಲು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಬದರಿನಾಥ್‌ಗೆ ಹೋಗುವ ಮಾರ್ಗವನ್ನು ಬಂದ್‌ ಮಾಡಲಾಗುವುದು ಎಂದು ಜೋಶಿಮಠ ಬಚಾವೊ ಸಂಘರ್ಷ ಸಮಿತಿ (ಜೆಬಿಎಸ್‌ಎಸ್‌) ಬುಧವಾರ ಬೆದರಿಕೆ ಹಾಕಿದೆ.

ಭಕ್ತರ ದರ್ಶನಕ್ಕಾಗಿ ಏಪ್ರಿಲ್‌ 27ರಂದು ಬದರಿನಾಥ್‌ ದೇವಾಲಯ ಪುನರಾರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಜೆಬಿಎಸ್‌ಎಸ್‌ ಈ ರೀತಿಯ ಬೆದರಿಕೆ ಹಾಕಿದೆ. ಜೋಶಿಮಠ ಭೂಕುಸಿತ ಸಮಸ್ಯೆಯನ್ನು ಇದೇ ಸಂಘಟನೆ ಮೊದಲ ಬಾರಿಗೆ ಎತ್ತಿ ತೋರಿಸಿತ್ತು.

ರಾಷ್ಟ್ರೀಯ ಉಷ್ಣ ವಿದ್ಯುತ್‌ ನಿಗಮದ (ಎನ್‌ಟಿಪಿಸಿ) ತಪೋವನ– ವಿಷ್ಣುಗಢ ಜಲವಿದ್ಯುತ್‌ ಯೋಜನೆ ಹಾಗೂ ಹೆಲಾಂಗ್‌– ಮಾರ್ವಾಡಿ ಬೈಪಾಸ್‌ ಯೋಜನೆಯನ್ನು ಸ್ಥಗಿತಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಜೆಬಿಎಸ್‌ಎಸ್‌ ಸರ್ಕಾರದ ಮುಂದಿಟ್ಟಿದೆ.

ADVERTISEMENT

ಈ ಕುರಿತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರಿಗೆ ಪತ್ರ ಬರೆದಿರುವ ಜೆಬಿಎಸ್‌ಎಸ್‌ ಸಂಚಾಲಕ ಅತುಲ್‌ ಸತಿ ಅವರು, ‘ಭೂ ಕುಸಿತದಿಂದ ಸಂತ್ರಸ್ತರಾಗಿರುವ ಜನರಿಗೆ ಸೂಕ್ತ ಪರಿಹಾರ ಹಾಗೂ ಪುನರ್ವಸತಿಯನ್ನು ಕಲ್ಪಿಸಬೇಕು. ಇವೆಲ್ಲ ಬೇಡಿಕೆಗಳನ್ನು ಏಪ್ರಿಲ್‌ 27ರೊಳಗೆ ಈಡೇರಿಸದಿದ್ದರೆ ಜನರನ್ನು ರಸ್ತೆಗಿಳಿದು ಪ್ರತಿಭಟಿಸುವಂತೆ ಒತ್ತಾಯಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ಜೋಶಿಮಠ ಬಿಕ್ಕಟ್ಟು ಕುರಿತಂತೆ ಪರಿಹಾರ ಕಂಡುಹಿಡಿಯಲು ಸ್ಥಳೀಯ ಹಾಗೂ ಜೆಬಿಎಸ್‌ಎಸ್‌ ಪ್ರತಿನಿಧಿಗಳನ್ನೊಳಗೊಂಡ ಉನ್ನತ ಸಮಿತಿಯನ್ನು ರಚಿಸುವಂತೆ ನಮ್ಮ ಸಮಿತಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತ್ತು. ಆದರೆ, ಸರ್ಕಾರ ಈ ಬಗ್ಗೆ ಗಮನಹರಿಸಲಿಲ್ಲ ಹಾಗೂ ಜನರ ಸಮಸ್ಯೆಗಳು ಹೆಚ್ಚುತ್ತಿವೆ’ ಎಂದಿದ್ದಾರೆ.

‘ಭೂಕುಸಿತ ಸಮಸ್ಯೆಗೆ ಸಂಬಂಧಿಸಿದಂತೆ ಪರಿಹಾರ ಕಂಡುಹಿಡಿಯಲು ಸ್ಥಳೀಯ ಮಟ್ಟದ ಸಹಕಾರ ಸಮಿತಿಯೊಂದನ್ನು ರಚಿಸುವಂತೆಯೂ ಬೇಡಿಕೆಯನ್ನಿಡಲಾಗಿತ್ತು. ಅದನ್ನೂ ನಿರ್ಲಕ್ಷಿಸಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.