ನವದೆಹಲಿ: ಕೇಂದ್ರದ ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು, ದಸರಾ ಹಬ್ಬದ ದಿನ ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಗಳನ್ನು ದಹಿಸಿದ್ದಾರೆ. ಯುವ ಕಾಂಗ್ರೆಸ್ನ ಈ ನಡೆಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಿಡಿಕಾರಿದ್ದಾರೆ.
‘ಭಾನುವಾರ ಪಂಜಾಬ್ನ ಎಲ್ಲಾ ಭಾಗಗಳಲ್ಲೂ ಪ್ರಧಾನಿ ಮೋದಿ ಪ್ರತಿಕೃತಿಗಳನ್ನು ಸುಡಲಾಗಿದೆ. ಮೋದಿ ವಿರುದ್ಧ ಆ ರಾಜ್ಯದಲ್ಲಿ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಈಗಲಾದರೂ ಪ್ರಧಾನಿಯವರು ಎಚ್ಚೆತ್ತುಕೊಳ್ಳಬೇಕು. ಶೀಘ್ರವೇ ಪಂಜಾಬ್ಗೆ ಭೇಟಿ ಕೊಟ್ಟು ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಬೇಕು. ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
ಇದರಿಂದ ಸಿಡಿಮಿಡಿಗೊಂಡಿರುವ ನಡ್ಡಾ, ‘ಇದು ರಾಹುಲ್ ಗಾಂಧಿ ಅವರ ಅಣತಿಯಂತೆಯೇ ನಡೆಯುತ್ತಿರುವ ನಾಟಕ. ಪ್ರಧಾನಿ ಅವರ ಪ್ರತಿಕೃತಿಗಳನ್ನು ದಹಿಸಿರುವುದು ನಾಚಿಕೆಯ ವಿಷಯ. ಇದು ಅನಿರೀಕ್ಷಿತವೇನಲ್ಲ’ ಎಂದಿದ್ದಾರೆ.
‘ನೆಹರೂ–ಗಾಂಧಿ ಕುಟುಂಬದವರು ಪ್ರಧಾನಿ ಕಚೇರಿಯನ್ನು ಎಂದೂ ಗೌರವಿಸಲಿಲ್ಲ. ಯುಪಿಎ ಆಡಳಿತಾವಧಿಯಲ್ಲಿ (2004–2014) ಪ್ರಧಾನಿಯ ಅಧಿಕಾರವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದ್ದನ್ನು ಎಲ್ಲರೂ ನೋಡಿದ್ದಾರೆ’ ಎಂದು ಅವರು ದೂರಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳು ರೈತರ ಹಿತಕ್ಕೆ ಮಾರಕವಾಗಿದ್ದು, ಇದರಿಂದ ಕನಿಷ್ಠ ಬೆಂಬಲ ಬೆಲೆ ನೀತಿಯೂ ರದ್ದಾಗಲಿದೆ ಎಂದು ಆರೋಪಿಸಿ ಮೊದಲಿನಿಂದಲೂ ಪಂಜಾಬ್ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಕೃಷಿ ಮಸೂದೆಗಳ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.