ADVERTISEMENT

ಕೋವಿಡ್‌ನಿಂದ ಮೃತಪಟ್ಟ ತಂದೆಯ ಮೃತದೇಹ ಪಡೆಯಲು ನಿರಾಕರಿಸಿದ ನ್ಯಾಯಾಧೀಶರು

ಅಭಯ್ ಕುಮಾರ್
Published 9 ಮೇ 2021, 17:16 IST
Last Updated 9 ಮೇ 2021, 17:16 IST
ಜಿಲ್ಲಾಡಳಿತ, ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್ ಯಾದವ್ ಅವರ ನೆರವಿನೊಂದಿಗೆ ಮೃತದೇಹವನ್ನು ಕಂಧವಾರ ನದಿಯ ದಡದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಬ್ಲೂಮ್‌ಬರ್ಗ್ ಚಿತ್ರ
ಜಿಲ್ಲಾಡಳಿತ, ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್ ಯಾದವ್ ಅವರ ನೆರವಿನೊಂದಿಗೆ ಮೃತದೇಹವನ್ನು ಕಂಧವಾರ ನದಿಯ ದಡದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಬ್ಲೂಮ್‌ಬರ್ಗ್ ಚಿತ್ರ   

ಪಾಟ್ನಾ: ಬಿಹಾರದ ಸಿವಾನ್ ಜಿಲ್ಲೆಯ ಕೆಳ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಕೋವಿಡ್‌ನಿಂದ ಮೃತಪಟ್ಟ ತಮ್ಮ 75 ವರ್ಷದ ತಂದೆಯ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ತಂದೆ ಕೋವಿಡ್‌ನಿಂದ ಮೃತಪಟ್ಟಿರುವುದರಿಂದ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋದರೆ ಇತರ ಕುಟುಂಬ ಸದಸ್ಯರಿಗೂ ಕೋವಿಡ್ -19 ಸೋಂಕು ತಗುಲುವ ಸಾಧ್ಯತೆಯಿದೆ ಎಂದು ಅವರು ಕಾರಣ ನೀಡಿದ್ದಾರೆ.

ಕೋವಿಡ್ ಪಾಸಿಟಿವ್ ಆಗಿದ್ದ ನ್ಯಾಯಾಧೀಶರ ತಂದೆಯನ್ನು ಸಿವಾನ್‌ನ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅವರ ಆಮ್ಲಜನಕದ ಮಟ್ಟವೂ ಕಡಿಮೆಯಾಗಿ ಶುಕ್ರವಾರ ತಡರಾತ್ರಿ ಅವರು ನಿಧನರಾಗಿದ್ದರು.

‘ನ್ಯಾಯಾಧೀಶರಿಗೆ ತನ್ನ ತಂದೆಯ ಸಾವಿನ ಬಗ್ಗೆ ತಿಳಿಸಲಾಗಿತ್ತು. ಆದರೆ, ಅವರು ತನ್ನ ಕುಟುಂಬದ ಇತರ ಸದಸ್ಯರು ಸೋಂಕಿಗೆ ಒಳಗಾಗಬಹುದೆಂದು ಭಾವಿಸಿದ್ದರಿಂದ ತಮ್ಮ ತಂದೆಯ ಶವವನ್ನು ನಿವಾಸಕ್ಕೆ ಕೊಂಡೊಯ್ಯಲು ನಿರಾಕರಿಸಿದರು. ಜಿಲ್ಲಾಡಳಿತವು ತಮ್ಮ ತಂದೆಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಬೇಕು ಎಂದು ಒತ್ತಾಯಿಸಿದರು’ ಎಂದು ಆರೋಗ್ಯ ಇಲಾಖೆಯ ಮೂಲವೊಂದು ತಿಳಿಸಿದೆ.

ADVERTISEMENT

ಆದರೆ, ಮೃತದೇಹವು 20 ಗಂಟೆಗಳ ಕಾಲ ಆಸ್ಪತ್ರೆಯಲ್ಲಿಯೇ ಇತ್ತು.

ಅಂತಿಮವಾಗಿ, ಶನಿವಾರ, ನ್ಯಾಯಾಧೀಶರು ತಮ್ಮ ಪರವಾಗಿ ಶವವನ್ನು ಪಡೆಯಲು ವಕೀಲರೊಬ್ಬರಿಗೆ ಅಧಿಕಾರ ನೀಡಿದರು.

‘ನ್ಯಾಯಾಧೀಶರ ತಂದೆಯ ಶವವನ್ನು ಎಸ್‌ಡಿಒ ರಾಮ್ ಬಾಬು ಪ್ರಸಾದ್ ಮತ್ತು ಉಸ್ತುವಾರಿ ಸಿವಿಲ್ ಸರ್ಜನ್ ಡಾ.ಎಂ.ಆರ್.ರಂಜನ್ ಅವರ ಸಮ್ಮುಖದಲ್ಲಿ ವಕೀಲರಿಗೆ ಹಸ್ತಾಂತರಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

ನಂತರ, ಜಿಲ್ಲಾಡಳಿತವು ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್ ಯಾದವ್ ಅವರ ನೆರವಿನೊಂದಿಗೆ ಮೃತದೇಹವನ್ನು ಕಂಧವಾರ ನದಿಯ ದಡದಲ್ಲಿ ಅಂತ್ಯಕ್ರಿಯೆ ನೆರವೇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.