ಹೈದರಾಬಾದ್: ಹೈದರಾಬಾದ್ನಲ್ಲಿ 2007ರಲ್ಲಿ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣದ ತೀರ್ಪನ್ನು ಇಲ್ಲಿನ ನ್ಯಾಯಾಲಯ ಸೋಮವಾರ (ಆಗಸ್ಟ್ 27) ಪ್ರಕಟಿಸಲಿದೆ.
ಪ್ರಕರಣದಲ್ಲಿ ಆರೋಪಿಗಳಾಗಿರುವ ನಾಲ್ವರ ವಿಚಾರಣೆಯನ್ನು ನಾಂಪಲ್ಲಿ ನ್ಯಾಯಾಲಯ ಸಮುಚ್ಚಯದಿಂದ ಚೆರ್ಲಪಲ್ಲಿ ಕೇಂದ್ರೀಯ ಕಾರಾಗೃಹದ ಆವರಣದಲ್ಲಿರುವ ನ್ಯಾಯಾಲಯಕ್ಕೆ ಜೂನ್ ತಿಂಗಳಲ್ಲಿ ಸ್ಥಳಾಂತರಿಸಲಾಗಿತ್ತು.
ವಿಚಾರಣೆ ಪೂರ್ಣಗೊಂಡ ಬಳಿಕ ಆಗಸ್ಟ್ 7ರಂದು ಸೆಷನ್ಸ್ ನ್ಯಾಯಾಧೀಶ ಶ್ರೀನಿವಾಸ ರಾವ್ ಅವರು ಆಗಸ್ಟ್ 27ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದ್ದರು.
ತೆಲಂಗಾಣ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದವರು ತನಿಖೆ ನಡೆಸಿದ್ದು, ಆರೋಪಿಗಳ ವಿರುದ್ಧ ಮೂರು ಆರೋಪಪಟ್ಟಿಗಳನ್ನು ಸಲ್ಲಿಸಿದ್ದರು. ಆರೋಪಿಗಳಲ್ಲಿ ಹಲವರು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ 2013ರಲ್ಲಿ ಮೆಟ್ರೊಪೊಲಿಟನ್ ಸೆಷನ್ಸ್ ನ್ಯಾಯಾಲಯವು ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತರಾದ ಅನೀಖ್ ಶಫೀಕ್ ಸಯ್ಯದ್, ಮೊಹಮ್ಮದ್ ಸಾದೀಕ್, ಅಕ್ಬರ್ ಇಸ್ಮಾಯಿಲ್ ಚೌಧರಿ ಮತ್ತು ಅನ್ಸರ್ ಅಹಮ್ಮದ್ ಬಾದ್ಶಾ ಶೇಕ್ ವಿರುದ್ಧ ಆರೋಪ ಹೊರಿಸಿತ್ತು. ಈ ನಾಲ್ವರು ಆರೋಪಿಗಳನ್ನು ಚೆರ್ಲಪಲ್ಲಿ ಕೇಂದ್ರೀಯ ಕಾರಾಗೃಹದಲ್ಲಿ ಇರಿಸಲಾಗಿದೆ.
2007 ಆಗಸ್ಟ್ 25ರಂದು ಹೈದರಾಬಾದ್ನ ಗೋಕುಲ ಚಾಟ್ ಮತ್ತು ಲುಂಬಿನಿ ಪಾರ್ಕ್ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 42 ಮಂದಿ ಮೃತಪಟ್ಟಿದ್ದರು. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.