ADVERTISEMENT

ಸಾಮಾಜಿಕ ಬದಲಾವಣೆಯಲ್ಲಿ ನ್ಯಾಯಾಧೀಶರ ಪಾತ್ರ ನಿರ್ಣಾಯಕ: ಸಿಜೆಐ

ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾ. ಚಂದ್ರಚೂಡ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 15:46 IST
Last Updated 25 ಫೆಬ್ರುವರಿ 2023, 15:46 IST
ಡಿ.ವೈ. ಚಂದ್ರಚೂಡ್
ಡಿ.ವೈ. ಚಂದ್ರಚೂಡ್   

ನವದೆಹಲಿ: ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳ ಆತ್ಮಹತ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು, ಸಾಮಾಜಿಕ ಬದಲಾವಣೆಯಲ್ಲಿ ನ್ಯಾಯಾಧೀಶರ ಪಾತ್ರವು ನಿರ್ಣಾಯಕವಾದದ್ದು ಎಂದು ಶನಿವಾರ ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್‌ನ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಶ್ವವಿದ್ಯಾಲಯದ (ಎನ್‌ಎಎಲ್‌ಎಸ್‌ಎಆರ್‌) 19ನೇ ವಾರ್ಷಿಕ ಘಟಿಕೋತ್ಸವದ ದಿಕ್ಸೂಚಿ ಭಾಷಣ ಮಾಡಿದ ಅವರು, ‘ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ದಲಿತ ಮತ್ತು ಆದಿವಾಸಿ ಸಮುದಾಯದವರು ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ’ ಎಂದರು.

‘ತಮ್ಮ ಮನೆ ತೊರೆದು ಓದಲು ಬರುವ ವಿದ್ಯಾರ್ಥಿಗಳೊಂದಿಗೆ ಸಾಂಸ್ಥಿಕ ರೂಪದ ಸ್ನೇಹದ ಬಂಧವನ್ನು ಸ್ಥಾಪಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ. ಒಬ್ಬೊಬ್ಬ ವಿದ್ಯಾರ್ಥಿಯು ಭಿನ್ನ ರೀತಿಯ ಸವಾಲುಗಳನ್ನು ಎದುರಿಸುತ್ತಾರೆ ಎಂಬುದನ್ನು ನಾವು ಅರಿಯಬೇಕು. ಈಚೆಗಷ್ಟೇ ಬಾಂಬೆ ಐಐಟಿಯಲ್ಲಿನ ದಲಿತ ವಿದ್ಯಾರ್ಥಿಯ ಆತ್ಮಹತ್ಯೆಯ ಬಗ್ಗೆ ನಾನು ಓದಿದ್ದೇನೆ. ಈ ಘಟನೆಯು ನನಗೆ ಕಳೆದ ವರ್ಷ ರಾಷ್ಟ್ರಮಟ್ಟದ ವಿಶ್ವವಿದ್ಯಾಲಯದಲ್ಲಿನ ಆದಿವಾಸಿ ವಿದ್ಯಾರ್ಥಿಯ ಆತ್ಮಹತ್ಯೆಯನ್ನು ನೆನಪಿಸಿತು’ ಎಂದರು.

ADVERTISEMENT

‘ನಮ್ಮ ಶಿಕ್ಷಣ ಸಂಸ್ಥೆಗಳು ಎಲ್ಲಿ ಎಡವುತ್ತಿವೆ. ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಜೀವವನ್ನು ಕೊನೆಗಾಣಿಸುವಂಥ ಪರಿಸ್ಥಿತಿ ಯಾವುದು ಎಂಬ ಬಗ್ಗೆ ಯೋಚಿಸುತ್ತಿದ್ದೇನೆ. ದೇಶದ ಹಿರಿಯ ಶಿಕ್ಷಣ ತಜ್ಞರಾದ ಪ್ರೊ. ಸುಖದೇವ್ ಥೋರಟ್ ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದ ಹೆಚ್ಚಿನ ವಿದ್ಯಾರ್ಥಿಗಳು ದಲಿತರು ಮತ್ತು ಆದಿವಾಸಿಗಳು ಎಂಬುದನ್ನು ಗಮನಿಸಿದ್ದಾರೆ. ಇದು ನಾವು ಪ್ರಶ್ನಿಸಬೇಕಾದ ಮಾದರಿಯನ್ನು ತೋರಿಸುತ್ತದೆ. ನಿಮ್ಮಲ್ಲಿ ಕೆಲವರಿಗೆ ನ್ಯಾಯಮೂರ್ತಿಗಳು ಏಕೆ ಇಂಥ ವಿಷಯದ ಕುರಿತು ಮಾತನಾಡುತ್ತಿದ್ದಾರೆ ಎಂದು ಆಶ್ಚರ್ಯ ಪಡಬಹುದು. ಆದರೆ, ನ್ಯಾಯಾಧೀಶರು ಸಾಮಾಜಿಕ ವಾಸ್ತವಗಳಿಂದ ದೂರ ಸರಿಯುವಂತಿಲ್ಲ ಮತ್ತು ನ್ಯಾಯಾಂಗ ಸಂವಾದದ ನಿದರ್ಶನಗಳು ಜಗತ್ತಿನಾದ್ಯಂತ ಸಾಮಾನ್ಯವಾಗಿದೆ’ ಎಂದು ಚಂದ್ರಚೂಡ್ ಹೇಳಿದರು.

‘ಜಾರ್ಜ್ ಫ್ಲಾಯ್ಡ್ ಹತ್ಯೆಯ ಬಳಿಕ ಅಮೆರಿಕದಲ್ಲಿ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಎನ್ನುವ ಚಳವಳಿ ರೂಪುಗೊಂಡಿತು. ಆಗ ವಾಷಿಂಗ್ಟನ್‌ ಸುಪ್ರೀಂ ಕೋರ್ಟ್‌ನ ಎಲ್ಲಾ 9 ನ್ಯಾಯಾಧೀಶರು, ಅಮೆರಿಕದಲ್ಲಿ ಕಪ್ಪುಜನರ ಅವನತಿ, ಅಪಮೌಲ್ಯೀಕರಣದ ಕುರಿತು ನ್ಯಾಯಾಂಗ ಮತ್ತು ಕಾನೂನು ಸಮುದಾಯವನ್ನು ಉದ್ದೇಶಿಸಿ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಇದೇ ರೀತಿಯಲ್ಲಿ, ಸಾಮಾಜಿಕ ಬದಲಾವಣೆಯಲ್ಲಿ ಭಾರತದ ನ್ಯಾಯಾಧೀಶರು ಸಂವಾದ ನಡೆಸುವ ಪ್ರಕ್ರಿಯೆಯಲ್ಲಿ ನ್ಯಾಯಾಲಯದ ಒಳಗೆ ಮತ್ತು ಹೊರಗೆ ಸಮಾಜದಲ್ಲೂ ನಿರ್ಣಾಯಕವಾದ ಪಾತ್ರವನ್ನು ಹೊಂದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.