ADVERTISEMENT

ಸಮರ್ಪಕ ಕಾರಣವಿಲ್ಲದೆಯೇ ಜಾಮೀನು ಮಂಜೂರು ಒಪ್ಪಲಾಗದು: ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 14:37 IST
Last Updated 11 ಏಪ್ರಿಲ್ 2021, 14:37 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಸಮರ್ಪಕ ಕಾರಣಗಳಿಲ್ಲದೆಯೇ ಆರೋಪಿಗೆ ಜಾಮೀನು ನೀಡುವುದನ್ನು ಒಪ್ಪಲಾಗದು ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಮೇಲ್ನೋಟಕ್ಕೆ ಕಂಡುಬರುವ ಕೆಲವೇ ಅಂಶಗಳನ್ನು ಆಧರಿಸಿ ಆದೇಶ ಹೊರಡಿಸುವ ಮಟ್ಟಕ್ಕೆ ಕ್ರಿಮಿನಲ್‌ ನ್ಯಾಯಾಂಗ ವ್ಯವಸ್ಥೆಯ ಆಡಳಿತ ಕುಸಿಯಬಾರದು ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಎಂ.ಆರ್‌.ಶಾ ಅವರಿರುವ ನ್ಯಾಯಪೀಠ ಹೇಳಿದೆ.

ಸೋನು ಯಾದವ್‌ ಎಂಬ ವ್ಯಕ್ತಿಗೆ ಜಾಮೀನು ಮಂಜೂರು ಮಾಡಿ ಅಲಹಾಬಾದ್‌ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಪಕ್ಕಕ್ಕಿರಿಸಿದ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿತು.

ADVERTISEMENT

ಸೋನು ಯಾದವ್‌ ಪತ್ನಿ 2019ರ ಫೆಬ್ರುವರಿ 8ರಂದು ಮೃತಪಟ್ಟಿದ್ದರು. ಅವರ ಮದುವೆಯಾಗಿ ಇನ್ನೂ 8 ತಿಂಗಳು ಸಹ ಕಳೆದಿರಲಿಲ್ಲ. ಆಕೆಯ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿದೆ.

‘ಆರೋಪಿಗೆ ಜಾಮೀನು ಮಂಜೂರು ಮಾಡಿ ಅಲಹಾಬಾದ್‌ ಹೈಕೋರ್ಟ್‌ 2020ರ ಡಿಸೆಂಬರ್‌ 1ರಂದು ಹೊರಡಿಸಿರುವ ಆದೇಶವು ನ್ಯಾಯದಾನ ಪ್ರಕ್ರಿಯೆಗೆ ಸಂಬಂಧಿಸಿ ರೂಢಿಯಲ್ಲಿರುವ ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾಗಿದೆ. ಆರೋಪಿಗೆ ಜಾಮೀನು ನೀಡಿರುವುದಕ್ಕೆ ಯಾವುದೇ ಆಧಾರಗಳಿಲ್ಲ’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಜಾಮೀನು ಅರ್ಜಿಯ ವಿಚಾರಣೆ ವೇಳೆ, ಪೂರಕ ಅಂಶಗಳ ಕುರಿತು ವಿಸ್ಥೃತ ತನಿಖೆ ಬೇಕಾಗಿಲ್ಲ ಎಂಬುದು ನಿಜ. ಆದರೆ, ಪ್ರತಿವಾದಿ ಮಂಡಿಸುವ ವಿಷಯ ಕುರಿತು ಅವಲೋಕನ ಅಗತ್ಯ’ ಎಂದೂ ನ್ಯಾಯಪೀಠ ಹೇಳಿದೆ.

‘ಇಂಥ ಪ್ರಕರಣಗಳ ವಿಷಯದಲ್ಲಿ ಹೈಕೋರ್ಟ್‌ ಉಪೇಕ್ಷೆ ತೋರಬಾರದು. ಈ ಪ್ರಕರಣದಲ್ಲಿ, ಮಹಿಳೆಗೆ ವರದಕ್ಷಿಣೆಗೆ ಸಂಬಂಧಿಸಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಇದೆ. ಈ ಆರೋಪದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕಿತ್ತು’ ಎಂದೂ ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.