
ನವದೆಹಲಿ: ‘ಜಗತ್ತಿನಾದ್ಯಂತ ಯುದ್ಧಗಳು, ಸಂಘರ್ಷಗಳು ನಡೆಯುತ್ತಿವೆ. ಇವುಗಳು ಅಂತರರಾಷ್ಟ್ರೀಯ ಸಹಕಾರದ ರೂಪುರೇಷೆಗೆ ಬೆದರಿಕೆ ಒಡ್ಡುತ್ತಿವೆ. ಈ ಹೊತ್ತಿನಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಣ ಸಂಬಂಧವು ಐಷಾರಾಮಿ ಅಗತ್ಯವಾಗದೆ, ಜೀವನಾಡಿಯಾಗಿ ಕೆಲಸ ಮಾಡಲಿದೆ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅಭಿಪ್ರಾಯಪಟ್ಟರು.
ಇತ್ತೀಚೆಗೆ ನಡೆದ ಭಾರತ–ಫ್ರಾನ್ಸ್ ಕಾನೂನು ಮತ್ತು ವ್ಯಾಪಾರ ಸಮ್ಮೇಳನದಲ್ಲಿ ‘ಗಡಿ ವಿವಾದಗಳ ನ್ಯಾಯತೀರ್ಮಾನ: ನ್ಯಾಯಾಲಯಗಳು, ಮಧ್ಯಸ್ಥಿಕೆ ಮತ್ತು ಭಾರತ–ಫ್ರಾನ್ಸ್ನ 2026ರ ನಾವೀನ್ಯ’ ವಿಷಯದ ಕುರಿತು ಅವರು ಮಾತನಾಡಿದರು.
‘ಭಾರತ ಮತ್ತು ಫ್ರಾನ್ಸ್ ದೇಶಗಳು ಹೊಸದೊಂದು ಘಟ್ಟಕ್ಕೆ ಪದಾರ್ಪಣೆ ಮಾಡಿದ್ದೇವೆ. ವಿವಾದಗಳ ನ್ಯಾಯ ತೀರ್ಮಾನದ ಸ್ವರೂಪವು ಪ್ರತಿಕ್ರಿಯಾತ್ಮಾಕವಾಗಿರದೆ, ನಿರ್ಧಾರಾತ್ಮಕವಾಗಿರಲಿದೆ. ಮಾರ್ಗದರ್ಶನವಾಗಿರದೆ, ತತ್ವಗಳ ಆಧಾರದಲ್ಲಿ ಇರಲಿದೆ ಮತ್ತು ನ್ಯಾಯ ತೀರ್ಮಾನವು ಕೇವಲ ಪರಿಣಾಮಕಾರಿಯಾಗಿರದೆ, ಅನಂತವಾಗಿರಲಿದೆ’ ಎಂದರು.
‘ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಎರಡೂ ದೇಶಗಳ ನುರಿತ ವೃತ್ತಿಪರರನ್ನು ನಿಯೋಜಿಸಲು ದಾರಿ ಸೃಷ್ಟಿಯಾಗಿದೆ. ಇದರಿಂದ ತಾಂತ್ರಿಕವಾದ ಮತ್ತು ಸಾಂಸ್ಕೃತಿಕ ತಜ್ಞತೆಯೂ ದೊರಕಲಿದೆ. ನ್ಯಾಯ ತೀರ್ಮಾನ ಸುಲಲಿತವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.