ನವದೆಹಲಿ: ಕೋಮು ದ್ವೇಷ ಮತ್ತು ಹಿಂಸಾಚಾರಕ್ಕೆ ಪ್ರೇರಿಪಿಸುವ ಟ್ವೀಟ್ ಮಾಡಿದ ರಂಗೋಲಿ ಚಂದೇಲ್ ಅವರ ಟ್ವಿಟರ್ ಖಾತೆಯನ್ನು ಟ್ವಿಟರ್ ಸಂಸ್ಥೆ ಅಮಾನತು ಮಾಡಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಸಹೋದರಿ ಆಗಿದ್ದಾರೆ ರಂಗೋಲಿ.
ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾದ ತಬ್ಲೀಗಿ ಜಮಾತ್ ಸದಸ್ಯರೊಬ್ಬರ ಕುಟುಂಬ ಪೊಲೀಸ್ ಮತ್ತು ವೈದ್ಯರ ಮೇಲೆ ದಾಳಿ ನಡೆಸಿದೆ ಎಂದು ಏಪ್ರಿಲ್ 15ರಂದು ರಂಗೋಲಿ ಟ್ವೀಟ್ ಮಾಡಿದ್ದರು. ಆದರೆ ಈ ಘಟನೆ ಬಗ್ಗೆ ಮಾಹಿತಿ ಅಥವಾ ವರದಿಯನ್ನಾಗಲೀ ಅವರು ಹಂಚಿಕೊಂಡಿಲ್ಲ.
ಈ ಮುಲ್ಲಾಗಳನ್ನು ಮತ್ತು ಸೆಕ್ಯುಲರ್ ಮಾಧ್ಯಮಗಳನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಬೇಕು.ಅವರು ನಮ್ಮನ್ನು ನಾಝಿಎಂದು ಕರೆದರೂ ಅಡ್ಡಿಯಿಲ್ಲ ಎಂದು ರಂಗೋಲಿ ಟ್ವೀಟಿಸಿದ್ದರು. ಈ ಟ್ವೀಟ್ 2,000ಕ್ಕಿಂತಲೂ ಹೆಚ್ಚು ಬಾರಿ ಶೇರ್ ಆಗಿದ್ದು 8,000 ಮಂದಿ ಲೈಕ್ ಮಾಡಿದ್ದರು.
ರಂಗೋಲಿಯ ಈ ಟ್ವೀಟ್ನ್ನು ಹಲವಾರ ಮಂದಿ ಖಂಡಿಸಿದ್ದು, ಆಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದರು.
ಟ್ವೀಟಿಗರು ರಂಗೋಲಿ ಟ್ವೀಟ್ಗೆ ಆಕ್ಷೇಪ ವ್ಯಕ್ತಪಡಿಸಿ ಖಾತೆಯನ್ನು ರಿಪೋರ್ಟ್ ಮಾಡಿದ್ದರಿಂದ ಟ್ವಿಟರ್ ಸಂಸ್ಥೆ ಆಕೆಯ ಖಾತೆಯನ್ನು ಅಮಾನತು ಮಾಡಿದೆ. ರಂಗೋಲಿಗೆ ಟ್ವಿಟರ್ನಲ್ಲಿ 95,0000 ಫಾಲೋಯರ್ಗಳಿದ್ದಾರೆ.
ಅಂದಹಾಗೆ ರಂಗೋಲಿ ಟ್ವೀಟ್ ವಿವಾದಕ್ಕೊಳಗಾಗಿದ್ದು ಇದೇ ಮೊದಲೇನೂ ಅಲ್ಲ.
ಕೋವಿಡ್ 19 ರೋಗ ಹರಡುತ್ತಿರುವ ಹೊತ್ತಲ್ಲಿ ದೇಶ ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿದ್ದೆ. ಹಾಗಾಗಿ 2024ರ ಲೋಕಸಭಾ ಚುನಾವಣೆಯನ್ನು ರದ್ದು ಮಾಡಬೇಕು ಎಂದು ರಂಗೋಲಿ ಟ್ವೀಟಿಸಿದ್ದರು. ಈ ವೇಳೆ ಟ್ವಿಟರ್ನಿಂದ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದ ರಂಗೋಲಿ ಇದಕ್ಕೆ ಕಾರಣ ವಿವರಿಸಿಲ್ಲ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮಗಳನ್ನು ದೇಶದ್ರೋಹಿ ಎಂದಿದ್ದ ರಂಗೋಲಿ, ತನ್ನ ಖಾತೆ ಅಮಾನತು ಮಾಡಿದರೆ ಈ ವೇದಿಕೆ ಸ್ಮಶಾನದ ದಾರಿ ಹಿಡಿಯುತ್ತದೆ ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.