ನವದೆಹಲಿ: ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದ ಟೈಲರ್ ಕನ್ಹಯ್ಯಾ ಲಾಲ್ ಅವರ ಹತ್ಯೆ ಪ್ರಕರಣದ ಆರೋಪಿಯೊಬ್ಬರಿಗೆ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
‘ಆರೋಪಿ ಮೊಹಮ್ಮದ್ ಜಾವೇದ್ ಅವರಿಗೆ ರಾಜಸ್ಥಾನ ಹೈಕೋರ್ಟ್ ಜಾಮೀನು ನೀಡಿದ್ದು, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎಂ.ಎಂ.ಸುಂದ್ರೇಶ್ ಹಾಗೂ ಸತೀಶ್ಚಂದ್ರ ಶರ್ಮಾ ಅವರು ಇದ್ದ ನ್ಯಾಯಪೀಠ ಹೇಳಿದೆ.
ಜಾವೇದ್ ಅವರಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅಧಿಕಾರಿಗಳು ಹಾಗೂ ಕೊಲೆಯಾಗಿರುವ ಕನ್ಹಯ್ಯಾ ಲಾಲ್ ಅವರ ಪುತ್ರ ಯಶ್ ತೆಲಿ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ವೇಳೆ, ‘ಈ ಪ್ರಕರಣದಲ್ಲಿ, ಜಾವೇದ್ ಪಾತ್ರ ಗಂಭೀರ ಸ್ವರೂಪದ್ದಾಗಿದೆ. ಕನ್ಹಯ್ಯಾ ಲಾಲ್ ಕುರಿತು ಹಾಗೂ ಹತ್ಯೆ ದಿನ ಅವರು ಇದ್ದ ಜಾಗದ ಬಗ್ಗೆ ಹಂತಕರಿಗೆ ಜಾವೇದ್ ಮಾಹಿತಿ ನೀಡಿದ್ದರು’ ಎಂದು ಯಶ್ ಪರ ವಕೀಲರು ಪೀಠಕ್ಕೆ ತಿಳಿಸಿದರು.
‘ಅಪರಾಧ ಕೃತ್ಯದ ಗಂಭೀರತೆಯನ್ನು ಅರಿಯದೆಯೇ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿರುವುದು ಸರಿಯಲ್ಲ’ ಎಂದು ಅವರು ನಿವೇದಿಸಿಕೊಂಡರು. ಎನ್ಐಎ ಪರ ವಕೀಲರು ಕೂಡ ಇದೇ ರೀತಿಯ ವಾದ ಮಂಡಿಸಿದರು.
ಕನ್ಹಯ್ಯಾ ಲಾಲ್ ಅವರನ್ನು 2022ರ ಜೂನ್ 28ರಂದು ಮೊಹಮ್ಮದ್ ರಿಯಾಜ್ ಹಾಗೂ ಮೊಹಮ್ಮದ್ ಗೌಸ್ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು, ಹತ್ಯೆಯ ವಿಡಿಯೊ ಚಿತ್ರೀಕರಣ ಮಾಡಿ, ಆನ್ಲೈನ್ ವೇದಿಕೆಗಳಲ್ಲಿ ಹಂಚಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.