ಜಮ್ಮು: ಜಮ್ಮು ಕಾಶ್ಮೀರದಲ್ಲಿ ಸೇನೆಯ ನಾಯಕರು ಸಾರ್ವಜನಿಕರ ಜೊತೆ ಬೆರೆತು ಸರ್ಕಾರದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಆರಂಭಿಸಿದ್ದಾರೆ. ಸೇನೆಯ ಉತ್ತರ ಕಮಾಂಡರ್ ರಣಬೀರ್ ಸಿಂಗ್ ಶನಿವಾರ ಕಾಶ್ಮೀರದಲ್ಲಿ ಯುವ ಸಮುದಾಯದವರೊಡನೆ ಮಾತುಕತೆ ನಡೆಸಿದರು.
‘ಈ ಪ್ರದೇಶದಲ್ಲಿ ಶಾಂತಿ ನೆಲೆಸುವುದನ್ನು ನಾವು ಬಯಸುತ್ತೇವೆ. ಇಲ್ಲಿನ ಯುವಕ– ಯುವತಿಯರು ಗುಣಮಟ್ಟದ ಶಿಕ್ಷಣ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬುದು ನಮ್ಮ ಬಯಕೆ. ಸೇನೆ ಮತ್ತು ಸರ್ಕಾರ ಜೊತೆಯಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಸ್ಥಳೀಯರು ನೀಡುವ ಸಲಹೆಗಳನ್ನು ಜಾರಿ ಮಾಡಲು ನಾವು ಸಿದ್ಧ’ ಎಂದು ರಣಬೀರ್ ಸಿಂಗ್ ಭರವಸೆ ನೀಡಿದರು.
ಶಿಕ್ಷಣ ತಜ್ಞರ ಆತಂಕ (ದೆಹಲಿ ವರದಿ): ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ಮುಂದುವರಿದಿರುವುದಕ್ಕೆ ಇಲ್ಲಿನ ಸುಮಾರು 500ಕ್ಕೂ ಹೆಚ್ಚು ಮಂದಿ ಶಿಕ್ಷಣ ತಜ್ಞರು ಮತ್ತು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಜೈಶ್ ಬೆಂಬಲಿಗರ ಬಂಧನ
ಜೈಶ್ ಎ–ಮೊಹಮ್ಮದ್ ಸಂಘಟನೆಯ ಪರ ಕೆಲಸ ಮಾಡುತ್ತಿದ್ದ ಮೂವರನ್ನು ಜಮ್ಮು ಕಾಶ್ಮೀರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
‘ಬಂಧಿತರು ಜೈಶ್ ಎ–ಮೊಹಮ್ಮದ್ ಸಂಘಟನೆಯ ಪರವಾಗಿ ಸ್ಥಳಿಯವಾಗಿ ಕೆಲಸ ಮಾಡುತ್ತಿದ್ದರಲ್ಲದೆ ಇಲ್ಲಿನ ಜನರಿಗೆ ಬೆದರಿಕೆಗಳನ್ನು ಹಾಕುತ್ತಿದ್ದರು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.