ನವದೆಹಲಿ: ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಬೆಂಗಳೂರು ಮೂಲದ ಕಂಪನಿಯೊಂದರ ₹ 40.14 ಕೋಟಿ ಆಸ್ತಿಯನ್ನು ಜಪ್ತಿ ಮಾಡಿದೆ.
ಕಾವೇರಿ ಟೆಲಿಕಾಂ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ಗೆ ಸೇರಿದ ಜನವಸತಿ ಅಪಾರ್ಟ್ಮೆಂಟ್, ಪ್ಲಾಟ್ಗಳು, ಕೃಷಿ ಭೂಮಿ ಮತ್ತು ಬ್ಯಾಂಕ್ ಠೇವಣಿಯನ್ನು ಜಪ್ತಿ ಮಾಡಲಾಗಿದೆ. 2015ರ ಜುಲೈನಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಸಿಬಿಐ ಎಫ್ಐಆರ್ ದಾಖಲಿಸಿತ್ತು.
ಸಲಕರಣೆಗಳ ಖರೀದಿ ಹೆಸರಿನಲ್ಲಿ ಕಂಪನಿ ನಿರ್ದೇಶಕರು ದೇನಾ ಬ್ಯಾಂಕ್ನಿಂದ ₹45 ಕೋಟಿ ಸಾಲ ಪಡೆದಿದ್ದರು. ನಂತರ ಆ ಹಣವನ್ನು ಸಂಸ್ಥೆಯ ನಿಯಂತ್ರಣದ ಮತ್ತೊಂದು ಘಟಕಕ್ಕೆ ವರ್ಗಾಯಿಸಿದ್ದರು. ಸಾಲ ಪಡೆಯಲು ಕಂಪನಿಯ ನಿರ್ದೇಶಕರು ನಕಲಿ ತೆರಿಗೆ ಸರಕು ಪಟ್ಟಿ, ರಶೀದಿ ಇತ್ಯಾದಿಗಳನ್ನು ಬ್ಯಾಂಕ್ಗೆ ಸಲ್ಲಿಸಿದ್ದಾರೆ ಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿದೆ.
ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಬ್ಯಾಂಕ್ಗೆ ವಂಚನೆ ಎಸಗಿದ್ದಾರೆ ಎಂದು ದೇನಾ ಬ್ಯಾಂಕ್, ಕಂಪನಿ ಮತ್ತು ಅದರ ನಿರ್ದೇಶಕರ ವಿರುದ್ಧ ದೂರು ನೀಡಿದ ಬಳಿಕ ಸಿಬಿಐ ಎಫ್ಐಆರ್ ದಾಖಲಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.