ಚಾರ್ಧಾಮ್ ಯಾತ್ರಾ ಸ್ಥಳಗಳಲ್ಲಿ ಒಂದಾದ ಕೇದಾರನಾಥ ದೇಗುಲದ ಬಾಗಿಲು ಇಂದು (ಶುಕ್ರವಾರ) ತೆರೆದಿದೆ.
ಪಿಟಿಐ ಚಿತ್ರ
ಕೇದಾರನಾಥ (ಉತ್ತರಾಖಂಡ): ಹಿಮಾಲಯದ ಮಡಿಲಲ್ಲಿರುವ ಕೇದಾರನಾಥ ದೇಗುಲವನ್ನು ಶುಕ್ರವಾರ ತೆರೆದಿದ್ದು, 12 ಸಾವಿರಕ್ಕೂ ಹೆಚ್ಚು ಯಾತ್ರಿಕರು ದರ್ಶನ ಪಡೆದರು.
ನಸುಕಿನ ಜಾವ ಐದಕ್ಕೆ ದೇಗುಲದ ದ್ವಾರ ತೆರೆಯುವ ಧಾರ್ಮಿಕ ವಿಧಿ–ವಿಧಾನ ಆರಂಭಗೊಂಡವು. ಏಳು ಗಂಟೆಗೆ ವಿಧ್ಯುಕ್ತವಾಗಿ ತೆರೆಯಲಾಯಿತು ಎಂದು ಬದರಿನಾಥ–ಕೇದಾರನಾಥ ದೇಗುಲ ಸಮಿತಿ (ಬಿಕೆಟಿಸಿ) ತಿಳಿಸಿದೆ.
11 ಸಾವಿರ ಅಡಿ ಎತ್ತರದಲ್ಲಿರುವ ದೇವಳವನ್ನು 108 ಟನ್ ಪುಷ್ಪಗಳಿಂದ ಅಲಂಕರಿಸಲಾಗಿದೆ. ಇದಕ್ಕಾಗಿಯೇ ನೇಪಾಳ, ಥೈಲ್ಯಾಂಡ್, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಿಂದ ಗುಲಾಬಿ, ಮಾರಿಗೋಲ್ಡ್ ಸೇರಿದಂತೆ 54 ತರಹೇವಾರಿ ಪುಷ್ಪಗಳನ್ನು ತರಿಸಿಕೊಳ್ಳಲಾಗಿತ್ತು ಎಂದು ಬಿಕೆಟಿಸಿ ಮಾಧ್ಯಮ ವಕ್ತಾರ ಹರೀಶ್ ಗೌರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪಾಲ್ಗೊಂಡಿದ್ದರು.
ಆರತಿ
ಮಂದಾಕಿನಿ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಈ ವರ್ಷದಿಂದ ಗಂಗಾರತಿ ಮಾದರಿಯಲ್ಲೇ ಆರತಿ ನಡೆಸಲಾಗುವುದು ಎಂದು ಬಿಕೆಟಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ಪ್ರಸಾದ್ ಥಾಪ್ಲಿಯಾಲ್ ತಿಳಿಸಿದ್ದು, ಭಕ್ತರು ಈ ದೃಶ್ಯ ವೈಭವ ಕಣ್ತುಂಬಿಕೊಳ್ಳಲು ಮೂರುಕಡೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಗಂಗೋತ್ರಿ, ಯಮುನೋತ್ರಿ ದೇಗುಲಗಳ ದ್ವಾರ ಏ. 30ರಂದು ತೆರೆದಿದ್ದು, ಬದರಿನಾಥದ ಬಾಗಿಲು ಮೇ 4ರಂದು ತೆರೆಯಲಿದೆ.
ಚಾರ್ ಧಾಮ್ ಯಾತ್ರೆಯ ನಾಲ್ಕು ದೇಗುಲಗಳಲ್ಲಿ ಮೂರನೇ ದೇವಾಲಯವಾಗಿರುವ ಕೇದಾರನಾಥವು ಪ್ರಮುಖವಾದದ್ದು. ಅಪಾರ ಸಂಖ್ಯೆಯ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ. ಇದು 11ನೇ ಜ್ಯೋತಿರ್ಲಿಂಗವೂ ಆಗಿದೆ. ಚಳಿಗಾಲದಲ್ಲಿ ಮುಚ್ಚಲ್ಪಟ್ಟಿದ್ದ ದೇಗುಲ ಇದೀಗ ತೆರೆದಿದೆ.
ಏ. 30ರಂದೇ ದ್ವಾರ ತೆರೆದ ಗಂಗೋತ್ರಿ, ಯಮುನೋತ್ರಿ ಬದರಿನಾಥನ ಬಾಗಿಲು ತೆರೆಯುವಿಕೆ ನಾಳೆ ಕೇದಾರನಾಥದಲ್ಲಿ ಈ ವರ್ಷದಿಂದಲೇ ಆರತಿ
ಕಳೆದ ವರ್ಷ 48 ಲಕ್ಷ ಯಾತ್ರಿಕರು ಚಾರ್ ಧಾಮ್ ಯಾತ್ರೆಯಲ್ಲಿ ಭಾಗಿಯಾಗಿದ್ದರೆ, ಪ್ರಸ್ತುತ ವರ್ಷ ಈ ಸಂಖ್ಯೆ 60 ಲಕ್ಷ ತಲುಪುವ ನಿರೀಕ್ಷೆಯಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.