ನವದೆಹಲಿ (ಪಿಟಿಐ): ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವಾಸವಿದ್ದ ವಿವಾದಾತ್ಮಕ ‘ಶೀಷಮಹಲ್’ ಬಂಗಲೆ ನವೀಕರಣದ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಜಾಗೃತ ಆಯೋಗವು (ಸಿವಿಸಿ) ದೆಹಲಿಯ ಲೋಕೋಪಯೋಗಿ ಇಲಾಖೆಗೆ ನಿರ್ದೇಶಿಸಿದೆ.
‘ಶೀಷ್ಮಹಲ್ ಹಗರಣದ ಬಗ್ಗೆ ಸಿವಿಸಿಗೆ ಎರಡು ಬಾರಿ ದೂರು ನೀಡಿದ್ದೆ. ಇದೀಗ ನನ್ನ ದೂರನ್ನು ಪರಿಗಣಿಸಿರುವ ಸಿವಿಸಿ, ಬಂಗಲೆ ನವೀಕರಣದ ಬಗ್ಗೆ ತನಿಖೆ ನಡೆಸಿ, ವಿಸ್ತೃತ ವರದಿ ಸಲ್ಲಿಸುವಂತೆ ದೆಹಲಿಯ ಲೋಕೋಪಯೋಗಿ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ’ ಎಂದು ದೆಹಲಿಯ ರೋಹಿಣಿ ಕ್ಷೇತ್ರದ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ತಿಳಿಸಿದ್ದಾರೆ.
‘ಕೇಜ್ರಿವಾಲ್ ಅವರು ನಿಯಮಗಳನ್ನು ಗಾಳಿಗೆ ತೂರಿ, ಬರೋಬ್ಬರಿ 8 ಎಕರೆಯಷ್ಟು (40 ಸಾವಿರ ಚ.ಅಡಿ) ಪ್ರದೇಶದಲ್ಲಿ ಐಶಾರಾಮಿ ಬಂಗಲೆ ನಿರ್ಮಿಸಿಕೊಂಡಿದ್ದಾರೆ. ತೆರಿಗೆದಾರರ ಹಣವನ್ನು ವೈಭೋಗದ ಜೀವನಕ್ಕಾಗಿ ಪೋಲು ಮಾಡಿದ್ದಾರೆ’ ಎಂದು ಆರೋಪಿಸಿ ಗುಪ್ತಾ ಅವರು ಸಿವಿಸಿಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.