ADVERTISEMENT

ಟೀಕೆಗಳ ಮೂಲಕ ಕೋವಿಡ್ ವಿರುದ್ಧದ ಹೋರಾಟ ದುರ್ಬಲಗೊಳಿಸುವ ಪ್ರಯತ್ನ: ಕೇರಳ ಸಿಎಂ

ಅನಗತ್ಯ ಟೀಕೆ ಸಲ್ಲದು: ಕೇರಳ ಸಿ.ಎಂ ಪಿಣರಾಯಿ ವಿಜಯನ್ ತಿರುಗೇಟು

ಪಿಟಿಐ
Published 27 ಆಗಸ್ಟ್ 2021, 11:19 IST
Last Updated 27 ಆಗಸ್ಟ್ 2021, 11:19 IST
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್   

ತಿರುವನಂತಪುರ: ‘ಕೇರಳದಲ್ಲಿ ದಿನೇದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಅಲ್ಲಿನ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದೆ’ ಎನ್ನುವ ಟೀಕೆಯನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ‘ಇಂಥ ಟೀಕೆ ಅನಗತ್ಯ. ಇದು ಕೋವಿಡ್‌ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಜನಬೆಂಬಲವನ್ನು ದುರ್ಬಲಗೊಳಿಸುವ ಪ್ರಯತ್ನ’ ಎಂದಿದ್ದಾರೆ.

ಆಡಳಿತಾರೂಢ ಸಿಪಿಎಂನ ಮುಖವಾಣಿ ‘ಚಿಂತಾ’ ವಾರಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ವಿಜಯನ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಸಮಾಜದಲ್ಲಿನ ಒಂದು ವಿಭಾಗವು ಕೇರಳದ ರೋಗ ನಿರ್ವಹಣಾ ತಂತ್ರಗಳನ್ನು ಟೀಕಿಸುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶಪೂರ್ವಕ ಪ್ರಯತ್ನಗಳನ್ನು ಮಾಡುತ್ತಿದೆ. ಈ ಕ್ರಮವು ಜನರನ್ನು ಸರ್ಕಾರದ ವಿರುದ್ಧ ಪ್ರಚೋದಿಸಿ, ರೋಗದ ವಿರುದ್ಧದ ಹೋರಾಟವನ್ನು ಹಗುರವಾಗಿ ನೋಡುವಂತೆ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಪರ್ಯಾಯ ನೀತಿಗಳನ್ನು ಮತ್ತಷ್ಟು ಬಲಪಡಿಸುವಿಕೆ’ ಶೀರ್ಷಿಕೆಯ ಲೇಖನದಲ್ಲಿ ವಿಜಯನ್ ಅವರು, ‘ಕೇರಳದಲ್ಲಿ ಆಕ್ಸಿಜನ್ ಕೊರತೆಯಿಂದ ಒಂದೂ ಸಾವು ಆಗಿಲ್ಲ. ಯಾರಿಗೂ ಆರೋಗ್ಯ ಸೇವೆ ನಿರಾಕರಿಸಿಲ್ಲ. ಕೋವಿಡ್ ಅನ್ನು ತಡೆಗಟ್ಟು ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಲಸಿಕೆ ಹಾಕುವುದು. ಇದನ್ನು ಖಾತ್ರಿಪಡಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ ಎಂಬುದು ಟೀಕಿಸುವವರಿಗೆ ಗೊತ್ತಿದೆ’ ಎಂದಿದ್ದಾರೆ.

ಕೇರಳದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 30 ಸಾವಿರ ದಾಟಿದ್ದು, ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿಯು, ಈ ಕುರಿತು ಸರ್ಕಾರ ತನ್ನ ಮೌನ ಮುರಿಯಬೇಕೆಂದು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ವಿಜಯನ್ ಅವರ ಹೇಳಿಕೆಯು ಮಹತ್ವ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.