ತಿರುವನಂತಪುರ: ಖಾಸಗಿ ಸಂಸ್ಥೆಯೊಂದು ಮಾರಾಟ ತೆರಿಗೆ ವಿನಾಯ್ತಿ ಕೋರಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಗೊಳಿಸಲು ವಿಳಂಬ ಮಾಡಿದ್ದಕ್ಕಾಗಿ, ಕೇರಳ ಹೈಕೋರ್ಟ್ ಐಎಎಸ್ ಅಧಿಕಾರಿಯೊಬ್ಬರಿಗೆ 100 ಸಸಿಗಳನ್ನು ನೆಡುವ ಶಿಕ್ಷೆ ವಿಧಿಸಿದೆ.
ಕೈಗಾರಿಕಾ ನಿರ್ದೇಶಕರಾಗಿರುವ ಕೆ. ಬಿಜು ಅವರು ಈ ಶಿಕ್ಷೆಗೆ ಗುರಿಯಾದವರು.
ರಾಸಾಯನಿಕ ಕ್ಷೇತ್ರದ ಖಾಸಗಿ ಸಂಸ್ಥೆಯೊಂದು ಮಾರಾಟ ತೆರಿಗೆ ವಿನಾಯ್ತಿ ಕೋರಿ 2001ರಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಕೈಗಾರಿಕಾ ಇಲಾಖೆ ಇದನ್ನು ತಿರಸ್ಕರಿಸಿತ್ತು. ಬಳಿಕ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. 2003ರಲ್ಲಿ ಈ ಸಂಬಂಧ ಆದೇಶ ನೀಡಿದ ಹೈಕೋರ್ಟ್, ಅರ್ಜಿ ಪರಿಶೀಲಿಸುವಂತೆ ಇಲಾಖೆಗೆ ಸೂಚಿಸಿತ್ತು. ಸಾಕಷ್ಟು ಬಾರಿ ವಿಚಾರಣೆ ನಡೆಸಿದರೂ ಇಲಾಖೆ ಅರ್ಜಿ ಇತ್ಯರ್ಥಗೊಳಿಸಿರಲಿಲ್ಲ.
ಮತ್ತೆ ಸಂಸ್ಥೆಯು ಹೈಕೋರ್ಟ್ ಮೊರೆ ಹೋದಾಗ, ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ರಾವಲ್ ಅವರು 2001ರಿಂದ ಈವರೆಗೆ ಕೈಗಾರಿಕಾ ನಿರ್ದೇಶಕ ಹುದ್ದೆ ನಿರ್ವಹಿಸಿದ ಎಲ್ಲರನ್ನೂ ಈ ವಿಳಂಬಕ್ಕೆ ಕಾರಣ ಎಂದು ಹೊಣೆ ಹೊರಿಸಿದ್ದಾರೆ. ಆದರೆ ಪ್ರಸ್ತುತ ಕೆ.ಬಿಜು ಅವರು ಈ ಹುದ್ದೆಯಲ್ಲಿರುವುದರಿಂದ 100 ಸಸಿಗಳನ್ನು ನೆಡುವಂತೆ ಅವರಿಗೆ ಸೂಚಿಸಲಾಗಿದೆ.
ಕೆ.ಬಿಜು ಅವರು ಕೇರಳ ಜಲಸಂಪನ್ಮೂಲ ಸಚಿವ ಕೆ.ಕೃಷ್ಣನ್ಕುಟ್ಟಿ ಅವರ ಮಗ. ಕುಟ್ಟಿ ಅವರು ಪಾಲಕ್ಕಾಡ್ನಲ್ಲಿ ಪ್ರಸಿದ್ಧ ಕೃಷಿಕರು ಸಹ ಆಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.