ನವದೆಹಲಿ: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಇದೀಗ ಅಲ್ಲಿಯೇ ಶಾಶ್ವತ ಮನೆಗಳನ್ನು ಕಟ್ಟಿಕೊಳ್ಳುವ ಮೂಲಕ ಕೃಷಿ ಕಾಯ್ದೆಗಳನ್ನು ರದ್ದು ಮಾಡದ ಹೊರತು ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಟಿಕ್ರಿ ಗಡಿಯಲ್ಲಿ ಕಿಸಾನ್ ಸೋಶಿಯಲ್ ಆರ್ಮಿಯು ಪ್ರತಿಭಟನಾ ನಿರತ ರೈತರಿಗಾಗಿ ಶಾಶ್ವತ ಮನೆಗಳನ್ನು ನಿರ್ಮಿಸಿದೆ.
"ಈ ಮನೆಗಳು ರೈತರ ಇಚ್ಛೆಯಂತೆ ಬಲವಾದವು ಮತ್ತು ಶಾಶ್ವತವಾದವು. ಸದ್ಯ, 25 ಮನೆಗಳನ್ನು ನಿರ್ಮಿಸಲಾಗಿದೆ, ಮುಂಬರುವ ದಿನಗಳಲ್ಲಿ ಅಂತಹುದೇ 1000-2000 ಮನೆಗಳನ್ನು ನಿರ್ಮಿಸಲಾಗುವುದು" ಎಂದು ಕಿಸಾನ್ ಸೋಶಿಯಲ್ ಆರ್ಮಿಯ ಅನಿಲ್ ಮಲಿಕ್ ಎಎನ್ಐಗೆ ತಿಳಿಸಿದ್ದಾರೆ.
ಈ ಮಧ್ಯೆ, ಶುಕ್ರವಾರ ರಾಜಸ್ಥಾನದ ಜೋಧಪುರದ ಪಿಪರ್ನಲ್ಲಿ ರೈತರ ‘ಮಹಾಪಂಚಾಯತ್’ಉದ್ದೇಶಿಸಿ ಮಾತನಾಡಿದ್ದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಯಾರೊಬ್ಬರ ಮಾತನ್ನೂ ಕೇಳದ ‘ಇಬ್ಬರು ವ್ಯಕ್ತಿಗಳ ಆಡಳಿತ’ಎಂದು ಟೀಕಿಸಿದ್ದರು..
"ಸರ್ಕಾರವಿದ್ದರೆ ಮಾತುಕತೆ ಸಾಧ್ಯವಾಗುತ್ತಿತ್ತು. ಆದರೆ, ದೇಶದಲ್ಲಿ ಇಬ್ಬರು ವ್ಯಕ್ತಿಗಳ ಸರ್ಕಾರವಿದೆ. ಈ ಆಡಳಿತವು ಯಾರ ಅಭಿಪ್ರಾಯವನ್ನೂ ಬಯಸುವುದಿಲ್ಲ ಎಂದು ಅವರು ಹೇಳಿದರು.
ನರೇಂದ್ರ ಮೋದಿ ಸರ್ಕಾರವು ತಮ್ಮನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸಬಹುದೆಂಬ ಭಯದಿಂದ ಪ್ರತಿಪಕ್ಷದ ನಾಯಕರು ಸಹ ರೈತರ ಪ್ರತಿಭಟನೆಗೆ ಹೆಚ್ಚಿನ ಬೆಂಬಲ ನೀಡುತ್ತಿಲ್ಲ ಎಂದು ರಾಕೇಶ್ ಟಿಕಾಯತ್ ವಾಗ್ದಾಳಿ ನಡೆಸಿದ್ದರು.
ರೈತರ ಆಂದೋಲನವು ದೀರ್ಘ ಹೋರಾಟವಾಗಲಿದೆ ಮತ್ತು ಅದನ್ನು ಪರಾಕಾಷ್ಠೆಗೆ ಕೊಂಡೊಯ್ಯಲು ಯುವಕರು ಸಿದ್ಧರಾಗಿರಬೇಕು ಎಂದು ಟಿಕಾಯತ್ ಕರೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.