ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿರುವ ಕಿಸಾನ್ ಮಜ್ದೂರ್ ಸಂಘದ 60 ರೈತರ ನಿಯೋಗವು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಗುರುವಾರ ಭೇಟಿ ಮಾಡಿದೆ.
ಕೃಷಿ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ಸುಧಾರಿಸುವ ಪ್ರಯತ್ನಗಳು ಕಳೆದ ಆರು ವರ್ಷಗಳಲ್ಲಿ ನಡೆದಿವೆ. ರೈತರು ದಿನಾಂಕ ನಿಗದಿಪಡಿಸಿ ಮಾತುಕತೆಗೆ ಬರಬೇಕು ಎಂದು ನರೇಂದ್ರ ಸಿಂಗ್ ತೋಮರ್ ಬುಧವಾರ ವಿನಂತಿಸಿಕೊಂಡಿದ್ದರು.
ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ಸ್ಪಷ್ಟ ಮತ್ತು ಲಿಖಿತ ಪ್ರಸ್ತಾವ ಮುಂದಿಟ್ಟರೆ ಮಾತ್ರ ಸರ್ಕಾರದೊಂದಿಗೆ ಮಾತುಕತೆ ಸಾಧ್ಯ ಎಂದು ರೈತರ ಸಂಘಟನೆಗಳ ಮುಖಂಡರು ತಿಳಿಸಿದ್ದರು.
ಈ ವಿಚಾರವಾಗಿ ಮಾತುಕತೆ ನಡೆಸಲು ರೈತ ಮುಖಂಡರು ನವದೆಹಲಿಯ ಕೃಷಿ ಭವನದಲ್ಲಿ ನರೇಂದ್ರ ಸಿಂಗ್ ತೋಮರ್ ಅವರನ್ನು ಗುರುವಾರ ಭೇಟಿ ಮಾಡಿದ್ದಾರೆ.
ಈಬೆಳವಣಿಗೆಗಳ ನಡುವೆಯೇ ದೆಹಲಿಯ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಬಾಸ್ಕೆಟ್ಬಾಲ್ ಆಟಗಾರ ಸತ್ನಮ್ ಸಿಂಗ್ ಪಾಲ್ಗೊಂಡಿದ್ದಾರೆ.
'ನಾವು ರೈತರನ್ನು ಬೆಂಬಲಿಸಲು ಬಂದಿದ್ದೇವೆ. ನಮ್ಮ ಕೈಲಾದ ಸೇವೆಯನ್ನು ಅವರಿಗೆ ನೀಡುತ್ತೇವೆ' ಎಂದು ಸತ್ನಮ್ ಸಿಂಗ್ ಹೇಳಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ರೈತರು ದೆಹಲಿ ಗಡಿಯಲ್ಲಿ ಮೂರು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.