ಕೋಲ್ಕತ್ತ: ‘ತಪ್ಪು ಭಾವಿಸಿ ದೂರು ದಾಖಲಿಸಿದ್ದೇನೆ’ ಎಂದು ದೂರುದಾರ ಮಹಿಳೆ ಹೇಳಿಕೆ ನೀಡಿದ ನಂತರ ಅತ್ಯಾಚಾರ ಪ್ರಕರಣವೊಂದರ ಆರೋಪಿಯನ್ನು ಕೋಲ್ಕತ್ತದ ಕೋರ್ಟೊಂದು ಖುಲಾಸೆಗೊಳಿಸಿದೆ.
2020ರ ನವೆಂಬರ್ 24ರಂದು ಪ್ರಕರಣ ದಾಖಲಾದ ನಂತರ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಕೋರ್ಟ್ ಜಾಮೀನು ನೀಡುವುದಕ್ಕೂ ಮೊದಲು ಅವರು 51 ದಿನ ಜೈಲಿನಲ್ಲಿ ಕಳೆದಿದ್ದರು.
ಮಹಿಳೆ ತನ್ನ ದೂರಿನಲ್ಲಿ, ತಾನು ಆ ವ್ಯಕ್ತಿಯೊಂದಿಗೆ 2017ರಿಂದ ಸಂಬಂಧ ಹೊಂದಿರುವುದಾಗಿ ಹೇಳಿದ್ದಾರೆ. ವ್ಯಕ್ತಿಯು ಮದುವೆಯಾಗುವುದಾಗಿ ಭರವಸೆ ನೀಡಿದ ಮೇರೆಗೆ ಸಾಲ್ಟ್ ಲೇಕ್ನ ಹೋಟೆಲ್ನಲ್ಲಿ ಅವರೊಂದಿಗೆ ರಾತ್ರಿ ಕಳೆದಿದ್ದಾಗಿ ಮತ್ತು ಅಲ್ಲಿ ದೈಹಿಕ ಸಂಬಂಧ ಬೆಳೆಸಿದ್ದಾಗಿ ಹೇಳಿದ್ದಾರೆ.
ಆದಾಗ್ಯೂ, ಮರುದಿನ ಬೆಳಿಗ್ಗೆ ವ್ಯಕ್ತಿಯು ಮದುವೆಯಾಗಲು ನಿರಾಕರಿಸಿ ಪರಾರಿಯಾಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ತಾನು ನಿರಪರಾಧಿ ಎಂದೇ ವ್ಯಕ್ತಿಯು ಹೇಳುತ್ತಾ ಬಂದಿದ್ದರು.
ಪ್ರಕರಣದ ವಿಚಾರಣೆಯ ಸಮಯದಲ್ಲಿ, ತಪ್ಪು ತಿಳಿವಳಿಕೆಯಿಂದಾಗಿ ತಾನು ದೂರು ದಾಖಲಿಸಿದ್ದು, ತನಗೆ ಬೇರೆ ಏನೂ ನೆನಪಿಲ್ಲ ಎಂದು ಮಹಿಳೆ ಹೇಳಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳು ತಿಳಿಸಿವೆ. ದೂರನ್ನು ತನ್ನ ಸ್ನೇಹಿತ ಬರೆದಿದ್ದು, ಅದರ ವಿಷಯಗಳನ್ನು ತಿಳಿಯದೆ ಸಹಿ ಮಾಡಿದ್ದಾಗಿಯೂ ಮಹಿಳೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.