ADVERTISEMENT

ಜಾಧವ್‌ಗೆ ಕಾನ್ಸಲ್‌ ನೆರವು ನಿರ್ಬಂಧ ಬೇಡ: ಭಾರತ

ಪಾಕ್‌ಗೆ ಭಾರತದ ವಿದೇಶಾಂಗ ಸಚಿವಾಲಯ ತಾಕೀತು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 18:33 IST
Last Updated 2 ಆಗಸ್ಟ್ 2019, 18:33 IST
ಕುಲಭೂಷಣ್‌ ಜಾಧವ್‌
ಕುಲಭೂಷಣ್‌ ಜಾಧವ್‌   

ನವದೆಹಲಿ:ಗೂಢಚರ್ಯೆ ನಡೆಸಿದ ಆರೋಪದಲ್ಲಿ ಬಂಧನದಲ್ಲಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಯಾವುದೇ ‘ನಿರ್ಬಂಧ’ ಇಲ್ಲದೇ ಕಾನ್ಸಲ್ ನೆರವು ನೀಡಬೇಕು ಎಂದು ಪಾಕಿಸ್ತಾನಕ್ಕೆ ಭಾರತ ಶುಕ್ರವಾರ ತಿಳಿಸಿದೆ.

‘ಜಾಧವ್‌ ಅವರು ಭೀತಿಗೆ ಒಳಗಾಗುವಂತಹ ವಾತಾವರಣ ಇರಬಾರದು. ಕಾನ್ಸಲ್‌ ಅಧಿಕಾರಿಗಳ ಜತೆಗೆ ಅವರು ನಡೆಸಿದ ಮಾತುಕತೆ ಆಧಾರದಲ್ಲಿ ಪ್ರತೀಕಾರ ತೀರಿಸಿಕೊಳ್ಳಬಾರದು’ ಎಂದು ಭಾರತ ಸ್ಪಷ್ಟಪಡಿಸಿದೆ.

ಕಾನ್ಸಲ್‌ ನೆರವು ನೀಡುವುದಾಗಿ ಹೇಳಿರುವ ಪಾಕಿಸ್ತಾನ ಕೆಲವು ಷರತ್ತುಗಳನ್ನು ವಿಧಿಸಿದೆ. ಭಾರತದ ಅಧಿಕಾರಿಗಳು ಹಾಗೂ ಜಾಧವ್‌ ಭೇಟಿಯ ಸಂದರ್ಭದಲ್ಲಿ ಪಾಕಿಸ್ತಾನದ ಅಧಿಕಾರಿಗಳು ಹಾಜರಿರುತ್ತಾರೆ ಎಂಬ ಷರತ್ತು ಹಾಕಿದೆ.

ADVERTISEMENT

2017ರ ಏಪ್ರಿಲ್‌ನಿಂದಲೂ ಜಾಧವ್ ಪಾಕಿಸ್ತಾನದಲ್ಲಿ ಬಂಧನದಲ್ಲಿದ್ದಾರೆ.

ಪಾಕಿಸ್ತಾನದ ಸೇನಾ ನ್ಯಾಯಾಲಯವು ಅವರಿಗೆ ಮರಣದಂಡನೆ ಘೋಷಿಸಿದೆ. ಆದರೆ ಈ ಶಿಕ್ಷೆಯನ್ನು ಮರುಪರಿಶೀಲನೆ ನಡೆಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯವು ಆದೇಶ ನೀಡಿದೆ.

ಜಾಧವ್ ಅವರನ್ನು ಭೇಟಿ ಮಾಡಲು ಮತ್ತು ಅಗತ್ಯ ಕಾನ್ಸಲ್ ನೆರವು ನೀಡಲು ಅವಕಾಶ ನೀಡಬೇಕು ಎಂದು ಭಾರತ ಹಲವು ಬಾರಿ ಮನವಿ ಮಾಡಿಕೊಂಡಿತ್ತು. ಪಾಕಿಸ್ತಾನ ಇದಕ್ಕೆ ಪೂರಕವಾಗಿ ಸ್ಪಂದಿಸಿರಲಿಲ್ಲ.

ಆದರೆ ಕಾನ್ಸಲ್ ನೆರವಿಗೆ ಅವಕಾಶ ನೀಡಬೇಕು ಎಂದು ಅಂತರರಾಷ್ಟ್ರೀಯ ನ್ಯಾಯಾಲಯವು ಜುಲೈ 16ರ ತನ್ನ ತೀರ್ಪಿನಲ್ಲಿ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.