ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ನಲ್ಲಿ ಬೀಡು ಬಿಟ್ಟ ಭಾರತೀಯ ಸೇನಾ ಸಿಬ್ಬಂದಿ
ಪಿಟಿಐ ಚಿತ್ರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆ ಏಳನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದು, ತಮ್ಮನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಸೈನಿಕರು ಹಗಲು– ರಾತ್ರಿ ಉಗ್ರರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾತ್ರಿಯಿಡೀ ಕೇಳಿಸುವ ಗುಂಡಿನ ಸದ್ದಿನ ಪರಿಣಾಮ ಆತಂಕದಿಂದ ಸಮಯಕಳೆಯುವಂತಾಗಿದೆ. ರಾತ್ರಿ ಸರಿಯಾಗಿ ನಿದ್ದೆಯನ್ನೂ ಮಾಡಲಾಗುತ್ತಿಲ್ಲ, ಇದರ ಜತೆಗೆ ನಮಗೆ ಆಹಾರ ಕೊರತೆಯೂ ಕಾಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಗ್ರಾಮದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಮುಬಾರಕ್ ಖಾಂಡೆ ಎನ್ನುವವರು, ‘ಕಳೆದ ಏಳು ದಿನಗಳಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ರಾತ್ರಿ ವೇಳೆ ನಡೆಯುವ ಬಾಂಬ್ ದಾಳಿ, ಗುಂಡಿನ ಸದ್ದು ನಿದ್ದೆಗೆಡಿಸಿದೆ. ಮನೆಗಳಲ್ಲಿ ಕಿರಾಣಿ ಸಾಮಗ್ರಿಗಳ ಕೊರತೆ ಕಾಡುತ್ತಿದೆ. ನಂಬಿರ್ದಾರ್ ಮತ್ತು ಚೌಕಿದಾರ್ರಂತಹ ಗ್ರಾಮದ ಅಧಿಕಾರಿಗಳು ನಮಗೆ ಕಿರಾಣಿ ಸಾಮಗ್ರಿ ಕೊಡುತ್ತಿದ್ದರು. ಆದರೆ ಈಗ ಅವರ ಬಳಿಯೂ ಖಾಲಿಯಾಗುತ್ತಿದೆ’ ಎಂದು ಅಲವತ್ತುಕೊಂಡಿದ್ದಾರೆ.
‘ಮಹಿಳೆಯರು, ಮಕ್ಕಳು ಗಾಬರಿಗೆ ಒಳಗಾಗಿದ್ದಾರೆ. ಎಲ್ಲರೂ ಒಂದು ರೀತಿಯ ಮಾನಸಿಕ ಹಿಂಸೆಯನ್ನು ಎದುರಿಸುತ್ತಿದ್ದೇವೆ. ಕಳೆದ ಏಳು ದಿನಗಳಿಂದ ಸರಿಯಾಗಿ ನಿದ್ರಿಸಿಲ್ಲ. ಗುಂಡಿನ ಸದ್ದಿಗೆ ರಾತ್ರಿ ವೇಳೆ ಮಕ್ಕಳು ಮಲಗುತ್ತಿಲ್ಲ, ಅಳುತ್ತಾರೆ. ಹೀಗಾಗಿ ನಮ್ಮನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಸರ್ಕಾರಕ್ಕೆ ಕೋರುತ್ತೇವೆ’ ಎಂದು ಅಳಲು ತೋಡಿಕೊಂಡಿದ್ದಾರೆ.
ಶೇಕ್ ಮೆಹಬೂಬ್ ಎನ್ನುವವರು ಮಾತನಾಡಿ, ‘ಗ್ರಾಮಕ್ಕೆ ಕಿರಾಣಿ ಸಾಮಗ್ರಿ ಮತ್ತು ಕುಡಿಯುವ ನೀರನ್ನು ಪೂರೈಸಬೇಕೆಂದು ಸರ್ಕಾರಕ್ಕೆ ಕೋರಿಕೊಳ್ಳುತ್ತೇವೆ. ಭದ್ರತಾ ಸಿಬ್ಬಂದಿ ಅವರ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಗುಂಡಿನ ಸದ್ದು ಮಕ್ಕಳಿಗೆ ಮತ್ತು ವೃದ್ಧಿರಿಗೆ ಸಮಸ್ಯೆಯಾಗಿ ಪರಿಣಮಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.