ADVERTISEMENT

ಕರ್ನೂಲ್‌ ಬಸ್‌ ದುರಂತ: ಮದ್ಯ ಸೇವಿಸಿ ಬೈಕ್‌ ಸವಾರಿ? ಹರಿದಾಡಿದ CCTV ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2025, 12:20 IST
Last Updated 25 ಅಕ್ಟೋಬರ್ 2025, 12:20 IST
   

ಕರ್ನೂಲ್‌: 20 ಜನರ ಸಾವಿಗೆ ಕಾರಣವಾದ ಕರ್ನೂಲ್ ಬಸ್‌ ದುರಂತಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಿಸಿಟಿವಿ ವಿಡಿಯೊ, ಮೃತ ಬೈಕ್‌ ಸವಾರ ಶಿವ ಶಂಕರ್(22) ಮದ್ಯಪಾನ ಮಾಡಿರುವ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.

ಬಸ್‌ ಅಪಘಾತಕ್ಕೂ ಸ್ವಲ್ಪ ಹೊತ್ತಿಗೂ ಮೊದಲು ಶಿವ ಶಂಕರ್ ಅವರು ಅಜಾಗರೂಕತೆಯಿದ ಬೈಕ್‌ ಓಡಿಸುತ್ತಿರುವುದು ಪೆಟ್ರೋಲ್‌ ಬಂಕ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತಡರಾತ್ರಿ 2.23ರ ಹೊತ್ತಿಗೆ ಹಿಂಬದಿ ಸವಾರನೊಂದಿಗೆ ಶಂಕರ್ ಪೆಟ್ರೋಲ್‌ ಬಂಕ್‌ಗೆ ಬಂದಿರುವುದು ವಿಡಿಯೊದಲ್ಲಿ ಕಾಣಬಹುದು. ಈ ವೇಳೆ ಬಂಕ್‌ನಲ್ಲಿ ಯಾರೂ ಇರದದ್ದನ್ನು ಕಂಡು ಹಿಂಬದಿ ಸವಾರ ಬೈಕ್‌ನಿಂದ ಇಳಿದು ಬಂಕ್‌ನ ಹೊರಗೆ ಹೋಗಿದ್ದಾನೆ. ಅವನ ಜೊತೆಯೇ ಹೋಗಿದ್ದ ಶಂಕರ್ ಹಿಂದಿರುಗಿ ಬಂದು ಬೈಕ್‌ಅನ್ನು ಒಂದೇ ಕೈಯಲ್ಲಿ ಎಳೆದು ತಿರುಗಿಸಿದ್ದಾನೆ. ನಂತರ ಬೈಕ್‌ ಹತ್ತಿ ಅಜಾಗರೂಕತೆಯಿಂದ ಓಡಿಸಿದ್ದಾನೆ.

ADVERTISEMENT

ವಿಡಿಯೊದಲ್ಲಿ ಶಂಕರ್ ಅವರ ವರ್ತನೆಗಳನ್ನು ಗಮನಿಸಿರುವ ನೆಟ್ಟಿಗರು, ಮದ್ಯಪಾನ ಮಾಡಿ ಬೈಕ್‌ ಓಡಿಸಿದ್ದರಿಂದಲೇ ಅಪಘಾತ ಸಂಭವಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಏತನ್ಮಧ್ಯೆ, ಶಂಕರ್ ಜೊತೆ ಬೈಕ್‌ನಲ್ಲಿದ್ದ ಹಿಂಬದಿ ಸವಾರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ವಿ.ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಬಸ್ಸು ಕರ್ನೂಲ್‌ ಜಿಲ್ಲೆಯ ಚಿನ್ನತೇಕೂರು ಗ್ರಾಮದ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದಿತ್ತು. ಘಟನೆಯಲ್ಲಿ ಬಸ್‌ನಲ್ಲಿದ್ದ 44 ಜನರ ಪೈಕಿ 19 ಜನರು ಸಜೀವ ದಹನಗೊಂಡಿದ್ದರು. ಬೈಕ್‌ ಸವಾರನು ಮೃತಪಟ್ಟಿದ್ದನು.

ಬಸ್‌ ಅಡಿ ಸಿಲುಕಿದ್ದ ಬೈಕ್‌ನ ಇಂಧನ ಟ್ಯಾಂಕ್‌ ಸ್ಟೋಟಗೊಂಡು ಬೆಂಕಿ ಹೊತ್ತಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ಬಸ್‌ ಚಾಲಕ ಮತ್ತು ಸಹ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.