ಔರಂಗಾಬಾದ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಧನೋರಾ ಗ್ರಾಮದ ಬಳಿ ಕಬ್ಬು ಕಟಾವು ಮಾಡುವ 40 ವರ್ಷದ ಕಾರ್ಮಿಕನ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತನನ್ನು ಪಿಂಟು ಮನೋಹರ್ ಪವಾರ್ ಎಂದು ಗುರುತಿಸಲಾಗಿದ್ದು, ಬೀಡ್ನಿಂದ 250 ಕಿ.ಮೀ ದೂರದಲ್ಲಿರುವ ಪುಣೆಯಿಂದ ಕಾಲ್ನಡಿಗೆಯಲ್ಲಿ ನಡೆದು ಬಂದಿದ್ದ. ಲಾಕ್ಡೌನ್ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ನಡೆದೇ ಮನೆಗೆ ಹೋಗಲು ನಿರ್ಧರಿಸಿ ತಮ್ಮ ಜಿಲ್ಲೆ ಪರಭಾನಿಗೆ ಮರಳಲು ಹೊರಟಿದ್ದನು ಎಂದು ಅಂಬೋರಾ ಪೊಲೀಸ್ ಠಾಣೆಯ ಸಹಾಯಕ ಇನ್ಸ್ಪೆಕ್ಟರ್ ದಯಾನೇಶ್ವರ್ ಕುಕ್ಲಾರೆ ಹೇಳಿದ್ದಾರೆ.
ಶವ ಪತ್ತೆಯಾದ ನಂತರ ಪೊಲೀಸರು ಪಿಂಟು ಕುಟುಂಬದ ಸದಸ್ಯರನ್ನು ಸಂಪರ್ಕಿಸಿ, ಶವ ಸ್ವೀಕರಿಸಲು ಕೋರಿದರು. ಆದರೆ ಸ್ಥಳಕ್ಕೆ ಬರಲು ಮತ್ತು ಅಂತ್ಯಸಂಸ್ಕಾರ ನೆರವೇರಿಸಲು ಸಾಧ್ಯವಿಲ್ಲ ಎಂದು ಕುಟುಂಬದ ಸದಸ್ಯರು ಕೈಚೆಲ್ಲಿದರು.ಕೊನೆಗೆ ಪೊಲೀಸರೇ ಪಿಂಟುವಿನ ಅಂತಿಮ ವಿಧಿ ವಿಧಾನವನ್ನು ಪೂರೈಸಿರುವುದಾಗಿ ಮಾಹಿತಿ ನೀಡಿದರು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಹಸಿವಿನಿಂದಲೇ ಪಿಂಟು ಸಾವನ್ನಪ್ಪಿರಬಹುದು ಎನ್ನಲಾಗಿದ್ದು, ಮರಣೋತ್ತರ ವರದಿ ಹೊರಬಿದ್ದ ಬಳಿಕವೇ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.