
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಬುಧವಾರ ಪುಣ್ಯಸ್ನಾನ ಮಾಡಿದ ಅಪಾರ ಸಂಖ್ಯೆಯ ಭಕ್ತಸಾಗರ
ಪಿಟಿಐ
ಲಖನೌ: ಪ್ರಯಾಗರಾಜ್ನ ತ್ರಿವೇಣಿ ಸಂಗಮದಲ್ಲಿ (ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿ ಸೇರುವ ಸ್ಥಳ) ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಅಂದಾಜು 80 ಲಕ್ಷ ಭಕ್ತರು ಬುಧವಾರ ಪುಣ್ಯಸ್ನಾನ ಮಾಡಿದರು.
ಮಕರ ಸಂಕ್ರಮಣದ ಪುಣ್ಯಸ್ನಾನಕ್ಕಾಗಿ ಮಂಗಳವಾರ ಮಧ್ಯರಾತ್ರಿಯಿಂದಲೇ ಸ್ನಾನಘಟ್ಟಗಳಲ್ಲಿ ಭಕ್ತಸಮೂಹವು ಜಮಾಯಿಸಿತ್ತು. ತಡರಾತ್ರಿ 12 ಗಂಟೆ ವೇಳೆಯದಲ್ಲೇ ಸುಮಾರು 50 ಲಕ್ಷ ಭಕ್ತರು ಸಂಗಮದಲ್ಲಿ ಮಿಂದೆದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಮಾಘ ಮೇಳ’ದ ಧಾರ್ಮಿಕ ಕಾರ್ಯಕ್ರಮಕ್ಕಾಗಿಯೇ ಸ್ಥಳೀಯ ಆಡಳಿತವು ಸಕಲ ಸಿದ್ಧತೆ ಮಾಡಿದೆ. ಮೇಳದ ಆವರಣ ಹಾಗೂ ಸ್ನಾನಘಟ್ಟಗಳ ಬಳಿ ವಾಹನಗಳ ಸಂಚಾರ ನಿರ್ಬಂಧಿಸಿದೆ.
ದೇಶದ ಎಲ್ಲೆಡೆಯಿಂದಲೂ ಭಕ್ತಸಾಗರ ಸಂಗಮದತ್ತ ಬಂದಿದ್ದು, ಎತ್ತ ದೃಷ್ಟಿ ಹಾಯಿಸಿದರೂ ಜನಸಾಗರವೇ ಕಂಡುಬಂದಿತು. ಇಡೀ ನಗರ ಭಕ್ತರಿಂದಲೇ ತುಂಬಿತ್ತು. ಪ್ರಯಾಗರಾಜ್ಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ವಾಹನ ದಟ್ಟಣೆಯಿಂದ ಕೂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.