ಸಂಸತ್ತಿನಲ್ಲಿ ಅವರು ಎಲ್ಲ ವಿಚಾರಗಳಲ್ಲಿಯೂ ವಿಫಲರಾಗಿದ್ದಾರೆ ಎಂಬುದು ನಮಗೆ ಗೊತ್ತಿದೆ. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಜತೆಗೆ ಕಾದಾಟ ನಡೆಯುತ್ತಿದ್ದರೆ ಅವರೊಂದು (ಪ್ರಧಾನಿ ನರೇಂದ್ರ ಮೋದಿ) ಅವತಾರ,ಅವರಿಲ್ಲದೆ ಭಾರತ ಉಳಿಯದು ಎಂದು ಬಿಂಬಿತವಾಗುತ್ತಾರೆ. ಆದರೆ, ಅವರಿಗೆ ಒಂದು ವಿಚಾರವನ್ನು ಹೇಳಲು ಬಯಸುತ್ತೇನೆ. ನಾನು ಅಥವಾ ಅವರು ಇರಲಿ, ಇಲ್ಲದಿರಲಿ ಭಾರತ ಉಳಿಯುತ್ತದೆ ಮತ್ತು ಮುಂದುವರಿಯುತ್ತದೆ
-ಫಾರೂಕ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ
ದೇಶಭಕ್ತಿ ಯಾವುದೇ ಪಕ್ಷದ ಆಸ್ತಿ ಅಲ್ಲ. ವಾಯುದಾಳಿಯು ಸೈನಿಕರ ಕರ್ತವ್ಯವೇ ಹೊರತು ಯಾರೋ ಹೇಳಿ ಮಾಡಿಸಿದ್ದಲ್ಲ.ಸೈನಿಕರು ಕಠಿಣ ತರಬೇತಿಯ ಬಳಿಕ ಪಡೆಯುವ ಸಮವಸ್ತ್ರ ಧರಿಸಿ ರಾಜಕಾರಣಿಗಳು ಕ್ಷುಲ್ಲಕವಾಗಿ ವರ್ತಿಸುವುದು ಏಕೆ? ವಾಯುದಾಳಿಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಇಂತಹ ವರ್ತನೆ ಪುಷ್ಟಿ ಕೊಡುತ್ತದೆ
-ಸಾಮ್ನಾ ಸಂಪಾದಕೀಯ(ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಅವರು ರ್ಯಾಲಿಯೊಂದರಲ್ಲಿ ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಂಡದ್ದಕ್ಕೆ ಪ್ರತಿಕ್ರಿಯೆ)
ಮತದಾನದ ಮೇಲೆ ರಂಜಾನ್ ಪ್ರಭಾವ ಬೀರುತ್ತದೆ ಎಂದು ಹೇಳುವುದು ಮುಸ್ಲಿಮರಿಗೆ ಮಾಡಿದ ಅವಮಾನ.ಹಾಗೇನೂ ಆಗುವುದಿಲ್ಲ. ಚುನಾವಣೆಯು ಸಾಂವಿಧಾನಿಕ ಬಾಧ್ಯತೆ, ಅದು ನಡೆಯಲೇಬೇಕು. ಮುಸ್ಲಿಮರು ರಂಜಾನ್ ವೇಳೆ ಉಪವಾಸ ಮಾಡುತ್ತಲೇ ಅಡುಗೆ ಮಾಡುತ್ತಾರೆ, ಕೆಲಸ ಮಾಡುತ್ತಾರೆ, ತಮ್ಮ ಕುಟುಂಬದ ಕ್ಷೇಮ ನೋಡಿಕೊಳ್ಳುತ್ತಾರೆ.
-ಅಸಾದುದ್ದೀನ್ ಓವೈಸಿ, ಎಐಎಂಐಎಂ ಅಧ್ಯಕ್ಷ
ಗಾಂಧೀಜಿಯ ಭಾರತ ಬೇಕೇ ಅಥವಾ ಗೋಡ್ಸೆಯ ಭಾರತ ಬೇಕೇ ಎಂದು ನೀವೇ ನಿರ್ಧಿರಿಸಿ. ಒಂದು ಕಡೆ ಪ್ರೀತಿ, ವಾತ್ಸಲ್ಯ. ಮತ್ತೊಂದು ದ್ವೇಷ, ಭೀತಿ. ಗಾಂಧೀಜಿ ಅವರು ನಿರ್ಭೀತರು. ವರ್ಷಗಳ ಕಾಲ ಜೈಲಿನಲ್ಲಿದ್ದರೂ ಬ್ರಿಟಿಷರ ವಿರುದ್ಧ ಪ್ರೀತಿಯಿಂದ ಮಾತನಾಡುತ್ತಿದ್ದರು. ಅದೇ ವೇಳೆ ಸಾವರ್ಕರ್ ಬ್ರಿಟಿಷರಿಗೆ ಪತ್ರ ಬರೆದು ಕ್ಷಮೆ ಕೇಳಿ, ಬಿಡುಗಡೆ ಆಡುವಂತೆ ಕೇಳಿಕೊಳ್ಳುತ್ತಿದ್ದರು. ಮೋದಿ ಅವರು ಮೇಕ್ ಇನ್ ಇಂಡಿಯಾ ಎಂದು ಹೇಳುತ್ತಾರೆ. ಆದರೆ ಅವರು ಧರಿಸುವ ಬಟ್ಟೆ, ಶೂ, ಸೆಲ್ಫಿ ತೆಗೆದುಕೊಳ್ಳುವ ಫೋನ್ ಚೀನಾ ನಿರ್ಮಿತ.
-ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ
ಚುನಾವಣೆ ಮೇಲೆ ರಂಜಾನ್ ಪರಿಣಾಮ ಬೀರುತ್ತದೆ ಎಂದು ಎಎಪಿ ಶಾಸಕ ಅಮಾನತುಲ್ಲಾ ಖಾನ್ ಹೇಳಿದ್ದಾರೆ. ಭಾರತದಲ್ಲಿ ಪ್ರತಿ ದಿನ ಒಂದಲ್ಲಾ ಒಂದು ಹಬ್ಬಗಳ ಆಚರಣೆ ನಡೆಯುತ್ತದೆ. ರಂಜಾನ್ ಒಂದು ಕಾರಣವಷ್ಟೇ. ಈ ಮೂಲಕ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಸೋಲೊಪ್ಪಿಕೊಂಡಿದೆ.
-ವಿಜಯ್ ಗೋಯಲ್, ಕೇಂದ್ರ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.