ಮುಂಬೈ: ಪುಣೆ ಜಿಲ್ಲೆಯ ಜುನ್ನಾರ್ನ ಬಲ್ಲಾಲ್ವಾಡಿ ಗ್ರಾಮದಲ್ಲಿ 70 ಅಡಿ ಆಳದ ಬಾವಿಗೆ ಬಿದ್ದಿದ್ದ ಚಿರತೆಯೊಂದನ್ನು ವೈಲ್ಡ್ ಲೈಫ್ ಎಸ್ಒಎಸ್ ಸಂಸ್ಥೆಯ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಶನಿವಾರ ರಕ್ಷಣೆ ಮಾಡಿದ್ದಾರೆ.
ಅಂದಾಜು ಒಂದು ವರ್ಷ ವಯಸ್ಸಿನ ಗಂಡು ಚಿರತೆ ಈಗ ವೈದ್ಯಕೀಯ ಚಿಕಿತ್ಸೆ ನಿರೀಕ್ಷಣೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಲದ ಸಮೀಪದ ಬಾವಿಗೆ ಚಿರತೆ ಬಿದ್ದಿರುವುದನ್ನು ಬಲ್ಲಾಲ್ವಾಡಿ ಗ್ರಾಮದ ರೈತರೊಬ್ಬರು ಗಮನಿಸಿದ್ದು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತಲುಪಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಾವಿಯೊಳಗೆ ಪಂಜರವನ್ನು ಇಳಿಸಿ ಅದರಲ್ಲಿ ಚಿರತೆಯನ್ನು ಸೆರೆಹಿಡಿದು ಮೇಲಕ್ಕೆತ್ತಿದ್ದಾರೆ.
ಚಿರತೆಯನ್ನು ಕೆಲ ದಿನಗಳವರೆಗೆ ಚಿರತೆ ಸಂರಕ್ಷಣಾ ಕೇಂದ್ರದಲ್ಲಿ ಇರಿಸಿ, ಬಳಿಕ ಕಾಡಿಗೆ ಬಿಡಲಾಗುವುದು ಎಂದು ವೈಲ್ಡ್ ಲೈಫ್ ಎಸ್ಒಎಸ್ನ ಪಶು ವೈದ್ಯಾಧಿಕಾರಿ ಡಾ. ನಿಖಿಲ್ ಬಂಗರ್ ತಿಳಿಸಿದ್ದಾರೆ.
ಚಿರತೆಯನ್ನು ಬಾವಿಯಿಂದ ಮೇಲಕ್ಕೆತ್ತುವ ಕಾರ್ಯಾಚರಣೆಯನ್ನು ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.