ನವದೆಹಲಿ: ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪೂರಕ ಬೇಡಿಕೆಗಳಿಗೆ ₹3.73 ಲಕ್ಷ ಕೋಟಿ ಅನುದಾನ ಒದಗಿಸಲು ಲೋಕಸಭೆ ಸೊಮವಾರ ಅನುಮೋದನೆ ನೀಡಿದೆ.
ಪೂರಕ ಅನುದಾನದಲ್ಲಿ ಏರ್ ಇಂಡಿಯಾದ ಉಳಿಕೆ ಆಸ್ತಿ ಮತ್ತು ಹೊಣೆಗಾರಿಕೆ ಹೊಂದಿರುವ ಕಂಪನಿಗೆ ₹ 62,000 ಕೋಟಿ, ಹೆಚ್ಚುವರಿ ರಸಗೊಬ್ಬರ ಸಬ್ಸಿಡಿಗೆ ₹58,430 ಕೋಟಿ, ಬಾಕಿ ಉಳಿದಿರುವ ರಫ್ತು ಪ್ರೋತ್ಸಾಹಕಗಳ ಪಾವತಿಗೆ ₹ 53,123 ಕೋಟಿ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ನಿಧಿಗೆ ಅನುದಾನ ವರ್ಗಾಯಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ₹ 22,039 ಕೋಟಿ ನಿಗದಿಪಡಿಸಲಾಗಿದೆ.
ಬೇಡಿಕೆಗಳ ಮೇಲಿನ ಚರ್ಚೆ ವೇಳೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಖಾದ್ಯ ತೈಲ ಮತ್ತು ಇತರ ಅಗತ್ಯ ವಸ್ತುಗಳ ಏರಿಕೆ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸದನಕ್ಕೆ ಭರವಸೆ ನೀಡಿದರು.
ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಸೇರಿದಂತೆ ಸಾಲ ಪಡೆದು ಪರಾರಿಯಾಗಿರುವವರಿಂದ ಬ್ಯಾಂಕುಗಳು ಇಲ್ಲಿಯವರೆಗೆ ₹ 13,109 ಕೋಟಿ ವಸೂಲಿ ಮಾಡಿವೆ ಎಂದು ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.