ತಿರುವನಂತಪುರ: ಕೊರೊನಾ ಮಾರ್ಗಸೂಚಿಗೆ ಅನುಸಾರವಾಗಿ ಕೇರಳದಲ್ಲಿ ಈ ಬಾರಿಯ ಓಣಂ ಹಬ್ಬವನ್ನು ಬಹಳ ಸರಳವಾಗಿ ಆಚರಿಸಲಾಗುತ್ತಿದೆ.
ಪ್ರತಿವರ್ಷವೂ ತಿರುಓಣಂ ದಿನದಂದು ಮಹಾರಾಜ ಮಹಾಬಲಿವೇಷಧಾರಿ ಮನೆ–ಮನೆಗೆ ಭೇಟಿ ನೀಡುತ್ತಾರೆ. ಗ್ರಾಮಗಳಲ್ಲಿ ಸಾಂಪ್ರದಾಯಿಕ ಕಲೆ ಪ್ರದರ್ಶನ, ಸಾಮೂಹಿಕ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ. ಈ ಮೂಲಕ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ ಈ ಬಾರಿ ಕೋವಿಡ್ ಸಾಂಕ್ರಾಮಿಕ ಪಿಡುಗಿನಿಂದ ಸಂಭ್ರಮಾಚರಣೆಗೆ ನಿರ್ಬಂಧವನ್ನು ಹೇರಲಾಗಿದೆ.
ಆದರೆ ಮನೆಗಳಲ್ಲಿ ಆಕರ್ಷಕ ಹೂವಿನ ರಂಗೋಲಿ (ಪೂಕಳಂ), ಭವ್ಯ ಅಲಂಕಾರ ಮಾಡಲಾಗಿದೆ. ಓಣಂ ಹಬ್ಬದ ಅಂಗವಾಗಿ ಆಯೋಜಿಸುವ ‘ಅಥಂ ಉತ್ಸವ’ವನ್ನು ಈ ಬಾರಿ ಆಚರಿಸಲಾಗುತ್ತಿಲ್ಲ.
ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಹಬ್ಬದ ಸಂದರ್ಭದಲ್ಲಿ ಜನತೆಗೆ ಶುಭಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.