ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಷ್ಟ್ರದ 180 ಕಡೆಗಳಲ್ಲಿ ರ್ಯಾಲಿ ನಡೆಸಲು ಯೋಜನೆ ರೂಪಿಸಿದ್ದು,ಯಾವ್ಯಾವ ಪ್ರದೇಶಕ್ಕೆ ಯಾವಾಗ ಭೇಟಿ ನೀಡಬೇಕು ಎನ್ನುವಪಟ್ಟಿ ಈಗಾಗಲೇ ಸಿದ್ಧವಾಗಿದೆ.
ಈ ಪಟ್ಟಿಯ ಅನುಗುಣವಾಗಿ ಪಕ್ಷ ಪ್ರಧಾನ ಕಾರ್ಯದರ್ಶಿ ಸಲಹೆ ಮೇರೆಗೆ ರಾಜ್ಯ ಘಟಕಗಳು ರ್ಯಾಲಿಯ ಯೋಜನೆ ವಿಸ್ತೃತವಾಗಿ ರೂಪಿಸಲಿವೆ. ಯಾರಿಗೆಲ್ಲ ಟಿಕೆಟ್ ನೀಡಬೇಕೆನ್ನುವ ಚರ್ಚೆ ಈಗಾಗಲೇ ಪ್ರಾರಂಭವಾಗಿದ್ದು, ಅದರ ಪಟ್ಟಿ ಸಿದ್ಧಪಡಿಸುವ ಕೆಲಸವೂ ಪಕ್ಷದ ಕಚೇರಿಗಳಲ್ಲಿ ನಡೆಯುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
‘ಯಾವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲವುದು ಅಗತ್ಯವಿದೆ ಎಂಬುದನ್ನು ಗಮನಿಸಿ, ಅಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಪಕ್ಷದ ಕೇಂದ್ರ ಕಚೇರಿಯಲ್ಲಿ ಪಟ್ಟಿ ಮಾಡಲಾಗುತ್ತಿದೆ’ ಎಂದರು. ಮೈತ್ರಿ ಸರ್ಕಾರ ಇರುವ ಕಡೆಗಳಲ್ಲಿ ಸೀಟು ಹಂಚಿಕೆಯ ಗೊಂದಲ ಇನ್ನೂ ಮುಂದುವರಿದಿದ್ದು, ಸೀಟು ಹಂಚಿಕೆ ಪಕ್ಷಕ್ಕೆ ಸವಾಲಿನ ಕೆಲಸವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿಯೂ ಹೆಚ್ಚು ಪರಿಣಾಮಕಾರಿಯಾಗಿ ಪ್ರಚಾರ ಮಾಡುವ ಬಗ್ಗೆಯೂ ಕಾಂಗ್ರೆಸ್ ಈ ಬಾರಿ ಹೆಚ್ಚು ಗಮನ ನೀಡಿದೆ. ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿನ ಲೋಪಗಳನ್ನು ಬಿತ್ತರಿಸುವುದಕ್ಕಾಗಿಯೇ ವಿಶೇಷ ವಿಡಿಯೊ ತಂಡವೊಂದನ್ನು ಕಾಂಗ್ರೆಸ್ ರಚಿಸಿದೆ. ಇದರಲ್ಲಿ ಸ್ವಾತಂತ್ರ್ಯ ಹರಣ, ಸಾಂಸ್ಥಿಕ ಸ್ವಾತಂತ್ರ್ಯ ಮತ್ತು ಮಹಿಳೆಯ ರಕ್ಷಣೆ... ಹೀಗೆ ನಾನಾ ವಿಷಯಗಳ ಬಗ್ಗೆ ತಿಳಿಸುವ ಯೋಜನೆಯನ್ನು ತಂಡ ಹೊಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.