ADVERTISEMENT

ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ: ಪಿ. ನೆಡುಮಾರನ್ ಅಚ್ಚರಿಯ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2023, 14:08 IST
Last Updated 13 ಫೆಬ್ರುವರಿ 2023, 14:08 IST
ವೇಲುಪಿಳ್ಳೈ ಪ್ರಭಾಕರನ್‌
ವೇಲುಪಿಳ್ಳೈ ಪ್ರಭಾಕರನ್‌   

ಚೆನ್ನೈ: ಶ್ರೀಲಂಕಾ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದ ‘ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ)’ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ, ತಮ್ಮ ಕುಟುಂಬದೊಂದಿಗೆ ಇದ್ದಾರೆ ಎಂದು ಕಾಂಗ್ರೆಸ್ ಮಾಜಿ ನಾಯಕ, ವಿಶ್ವ ತಮಿಳು ಒಕ್ಕೂಟದ ಅಧ್ಯಕ್ಷ ಪಿ ನೆಡುಮಾರನ್ ಸೋಮವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ತಂಜಾವೂರಿನಲ್ಲಿ ಸೋಮವಾರ ಮಾತನಾಡಿರುವ ಅವರು, ‘ನಮ್ಮ ತಮಿಳು ರಾಷ್ಟ್ರೀಯ ನಾಯಕ ಪ್ರಭಾಕರನ್ ಬಗ್ಗೆ ಸತ್ಯವೊಂದನ್ನು ಪ್ರಕಟಿಸಲು ನನಗೆ ಸಂತಸವಾಗಿದೆ. ಅವರು ಬದುಕಿದ್ದಾರೆ. ಪ್ರಪಂಚದಾದ್ಯಂತ ಇರುವ ತಮಿಳರಿಗೆ ಇದನ್ನು ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ. ಇದುವರೆಗೆ ಅವರ ಬಗ್ಗೆ ವ್ಯವಸ್ಥಿತವಾಗಿ ಹಬ್ಬಿದ್ದ ಊಹಾಪೋಹಗಳನ್ನು ಈ ಸುದ್ದಿ ಕೊನೆಗಾಣಿಸಲಿದೆ’ ಎಂದು ಅವರು ಹೇಳಿದ್ದಾರೆ.

‘ಅವರು (ಪ್ರಭಾಕರನ್) ಶೀಘ್ರದಲ್ಲೇ ತಮಿಳರಿಗಾಗಿ ಯೋಜನೆಯನ್ನು ಘೋಷಿಸಲಿದ್ದಾರೆ. ವಿಶ್ವದ ಎಲ್ಲಾ ತಮಿಳರೂ ಒಟ್ಟಾಗಿ ಅವರನ್ನು ಬೆಂಬಲಿಸಬೇಕು’ ಎಂದೂ ಅವರು ಹೇಳಿದ್ದಾರೆ.

ADVERTISEMENT

ತಮಿಳರಿಗಾಗಿ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಪ್ರತ್ಯೇಕ ಹೋರಾಟ ಕೈಗೊಂಡಿದ್ದ ಪ್ರಭಾಕರನ್ ಅವರನ್ನು 2009ರ ಮೇ 19ರಂದು ಮುಲ್ಲೈವೈಕ್ಕಲ್‌ನಲ್ಲಿ ಹತ್ಯೆ ಮಾಡಿದ್ದಾಗಿ ಶ್ರೀಲಂಕಾ ಸೇನೆ ಹೇಳಿಕೊಂಡಿತ್ತು.

ಸರ್ಕಾರದ ವಾದವನ್ನು ಒಪ್ಪದ ಕೆಲವು ತಮಿಳು ರಾಷ್ಟ್ರೀಯವಾದಿಗಳು, ಪ್ರಭಾಕರನ್ ಈಗಲೂ ಬದುಕಿರುವ ಸಾಧ್ಯತೆ ಇದೆ ಎಂದೇ ನಂಬಿದ್ದಾರೆ. 2009ರ ಯುದ್ಧದಲ್ಲಿ ಅವರು ತಪ್ಪಿಸಿಕೊಂಡಿರಬಹುದು ಎಂದು ಭಾವಿಸಿದ್ದಾರೆ.

ಶ್ರೀಲಂಕಾ ಸೇನೆ ಮತ್ತು ತಮಿಳರ ನಡುವಿನ ಘರ್ಷಣೆಯನ್ನು ಹತ್ತಿಕ್ಕಲು ರಾಜೀವ್ ಗಾಂಧಿಯವರು ಶ್ರೀಲಂಕಾ ಪರವಾಗಿ ಭಾರತದ ಮಿಲಿಟರಿಯನ್ನು ಕಳಿಸಿದ ಕಾರಣ ತಮಿಳುನಾಡಿನ ರಾಮನಾಥಪುರಂನಲ್ಲಿ 1991ರ ಮೇ 21ರಂದು ರಾಜೀವ್ ಗಾಂಧಿ ಅವರ ಹತ್ಯೆ ನಡೆದಿತ್ತು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.