ನವದೆಹಲಿ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರ ಸಂಬಂಧಿಕರಿಗೆ ₹3.07 ಕೋಟಿ ಪರಿಹಾರ ನೀಡುವಂತೆಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ಆದೇಶ ನೀಡಿದೆ.
‘ಎದುರಿನಿಂದ ಬಂದ ವಾಹನದ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ. ಈ ಕಾರಣದಿಂದ ಮೃತ ಕುಟುಂಬದ ಸಂಬಂಧಿಕರಿಗೆ ವಿಮಾ ಕಂಪನಿ ಪರಿಹಾರ ನೀಡಬೇಕು’ ಎಂದು ಎಂಎಸಿಟಿಯ ಅಧಿಕಾರಿ ಎಂ.ಕೆ.ನಾಗ್ಪಾಲ್ ಅವರು ತಿಳಿಸಿದ್ದಾರೆ.
2012ರ ಡಿಸೆಂಬರ್ 29ರಂದು ಸಂದೀಪ್ ಬಲೋಡಿ, ಸತೀಶ್ ಕುಮಾರ್ ಹಾಗೂ ದೀಪಕ್ ಕೈಂತೊಲಾ ಹಾಗೂ ಇನ್ನಿಬ್ಬರು ಮಾರುತಿ ಸ್ಟಿಫ್ಟ್ ಕಾರಿನಲ್ಲಿಉತ್ತರಾಖಂಡದ ಕೊಟಾದ್ವಾರ್ನಿಂದ ನೊಯಿಡಾಕ್ಕೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಟ್ರ್ಯಾಕ್ಟರ್ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಸಾವನ್ನಪ್ಪಿದ್ದರು, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದರು.
‘ಅಪಘಾತಕ್ಕೆ ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆ ಚಾಲನೆಯೇ ಕಾರಣ. ಈ ಪ್ರಕರಣದಲ್ಲಿ ಅವರೇ ಚಾಲಕರು, ಮಾಲೀಕರು, ವಿಮಾದಾರರು ಆಗಿದ್ದಾರೆ. ಈ ಕಾರಣದಿಂದ ಅವರು ವಿಮೆ ಮಾಡಿರುವ ಒರಿಯಂಟಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆಯೂ ದೊಡ್ಡ ಮೊತ್ತದ ಪರಿಹಾರ ಪಾವತಿಸಬೇಕು’ಎಂದು ನಾಗ್ಪಾಲ್ ತಿಳಿಸಿದ್ದಾರೆ.
ಮೃತ ಸದಸ್ಯರು ಪಡೆಯುತ್ತಿದ್ದ ಆದಾಯ ಹಾಗೂ ಕುಟುಂಬಸ್ಥರ ಆರ್ಥಿಕ ಹಿನ್ನೆಲೆಯನ್ನು ಪರಿಗಣಿಸಿ ಪರಿಹಾರ ಮೊತ್ತ ಘೋಷಿಸಲಾಗಿದೆ ಎಂದರು.
ಈ ಪ್ರಕರಣದಲ್ಲಿ 25 ವರ್ಷದ ಬಲೋಡಿ ಕುಟುಂಬದ ಹೆತ್ತವರಿಗೆ ₹10.83 ಲಕ್ಷ, ಸತೀಶ್ ಕುಮಾರ್ ಕುಟುಂಬದ ಹೆತ್ತವರಿಗೆ ₹53.65 ಲಕ್ಷ ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ದೀಪಕ್ ಹೆತ್ತವರಿಗೆ ₹2.42 ಕೋಟಿ ಮೊತ್ತವನ್ನು ಪಾವತಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.