ನವದೆಹಲಿ: ಅಪರಿಚಿತ ವ್ಯಕ್ತಿಯೊಬ್ಬರು ತುರಿಕೆ ಪುಡಿ ಎರಚಿದ ಪರಿಣಾಮ ಉರಿ ತಡೆಯಲಾರದೆ ಮಧ್ಯಪ್ರದೇಶದ ಬಿಜೆಪಿ ಸಚಿವ ಬ್ರಜೇಂದ್ರ ಸಿಂಗ್ ಯಾದವ್ ಅವರು ಸಾರ್ವಜನಿಕ ಸಭೆಯಲ್ಲೇ ಕುರ್ತಾ ತೆಗೆದು ಮೈ ತೊಳೆದುಕೊಂಡಿದ್ದಾರೆ.
ಬಾಟಲಿ ನೀರಿನಿಂದ ಕೈ, ಮೈ ತೊಳೆದುಕೊಳ್ಳುತ್ತಿರುವ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಡಾಡುತ್ತಿದೆ.
ಮಧ್ಯಪ್ರದೇಶದ ಮುಂಗೋಲಿ ಗ್ರಾಮದ ಮೂಲಕ ಬಿಜೆಪಿ ವಿಕಾಸ್ ರಥಯಾತ್ರೆ ವೇಳೆ ಈ ಘಟನೆ ನಡೆದಿದೆ. ಸಾರ್ವಜನಿಕ ಸಭೆಯೊಂದರಲ್ಲಿ ಸಚಿವ ಬ್ರಜೇಂದ್ರ ಸಿಂಗ್ ಯಾದವ್ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರು ತುರಿಕೆ ಪುಡಿ ಎರೆಚಿದ್ದಾರೆ.
ಎರಡು ದಿನಗಳ ಹಿಂದೆ ವಿಕಾಸ ರಥವು ಖಾಂಡ್ವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಾಗುತ್ತಿದ್ದಾಗ ಹಾಳಾದ ರಸ್ತೆಯಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಯಾತ್ರೆಯ ನೇತೃತ್ವ ವಹಿಸಿದ್ದ ಸ್ಥಳೀಯ ಬಿಜೆಪಿ ಶಾಸಕ ದೇವೇಂದ್ರ ವರ್ಮಾ ಮತ್ತು ಗ್ರಾಮದ ಮಾಜಿ ಸರಪಂಚ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಪ್ರದೇಶದಲ್ಲಿ ಸರ್ಕಾರ 3 ಕಿ.ಮೀ ರಸ್ತೆಯನ್ನು ಮಂಜೂರು ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರು.
‘ನಾವು ಕಾಂಗ್ರೆಸ್ಸಿಗರನ್ನು ಕೆಟ್ಟವರೆಂದುಕೊಂಡಿದ್ದೆವು. ಆದರೆ, ನೀವು (ಬಿಜೆಪಿಗರು) ಕಾಂಗ್ರೆಸ್ಗಿಂತ ಕೆಟ್ಟವರು, ನಮಗೆ ಸರಿಯಾದ ರಸ್ತೆ ಸೌಲಭ್ಯ ಕಲ್ಪಿಸುವಲ್ಲಿ ನೀವು ವಿಫಲರಾಗಿದ್ದೀರಿ. ನಾವು ನಿಮಗೆ ಮತ ಹಾಕುವುದಿಲ್ಲ’ ಎಂದು ಸ್ಥಳೀಯರು ಘೋಷಣೆ ಕೂಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.